ಮೈಸೂರು: ‘ಚುಟುಕುಗಳು ಕ್ಷಣಾರ್ಧ ದಲ್ಲಿ ರಚನೆಯಾದರೂ ವಿಶಾಲವಾದ ಅರ್ಥವನ್ನು ಹೊಂದಿರುತ್ತವೆ. ಹೀಗಾಗಿ ಚುಟುಕು ಬರೆಯುವವರು ಸಣ್ಣ ಕವಿಗಳೆಂಬ ಕೀಳರಿಮೆ ಬೇಡ’ ಎಂದು ಕವಯತ್ರಿ ಲತಾ ರಾಜಶೇಖರ್ ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಸರಾ ಚುಟುಕು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
‘ಚುಟುಕು ಮನುಕುಲದ ಆದಿಕಾವ್ಯ ವೆಂದು ಬಣ್ಣಿಸಲಾಗಿದೆ. ಅವು ವಿವಿಧ ಕಾಲಘಟ್ಟದಲ್ಲಿ ಬೇರೆ, ಬೇರೆ ಹೆಸರಿನಿಂದ ಕರೆಯಲ್ಪಟ್ಟಿವೆ. ಗಝಲ್, ಶಾಹಿರ್ ಮೂಲಕ ಅವು ಪ್ರಚಾರ ಪಡೆದಿವೆ. ಚುಟುಕು ತನ್ನದೇ ಆದ ಮಹತ್ವವನ್ನು ಪಡೆದಿದೆ’ ಎಂದು ತಿಳಿಸಿದರು.
‘ಆಕಾರದಲ್ಲಿ ಚಿಕ್ಕದಾಗಿ ಕಾಣುವ ಚುಟುಕುಗಳು ಅದ್ಭುತ ಜೀವನ ಪಾಠವನ್ನು ಬೋಧಿಸಬಲ್ಲುದು. ವೇಗದ ಜೀವನಕ್ಕೆ ಅಂಟಿರುವ ಇಂದಿನ ಜನರಿಗೆ ಚುಟುಕು ಹೆಚ್ಚು ಆಪ್ತವಾಗುತ್ತದೆ. ಇದರ ಪರಂಪರೆ ಮತ್ತು ಮಹತ್ವ ಬಹಳಷ್ಟಿದ್ದು, ಸಂಶೋಧನೆಗೆ ವಸ್ತುವಾಗಬಲ್ಲದು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಹಾಲಪ್ಪಗೌಡ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಸ್ಥಾಪಕ ಎಂ.ಜಿ.ಆರ್.ಅರಸ್, ಧರ್ಮದರ್ಶಿ ವೀರಭದ್ರೇಗೌಡ, ಬೆಂಗಳೂರಿನ ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ವಿಜಯಸಮರ್ಥ್, ಎಂ.ಎ.ಸುಜಾತಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.