ADVERTISEMENT

ಮೃಗಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 16:05 IST
Last Updated 1 ಜೂನ್ 2022, 16:05 IST

ಮೈಸೂರು: ಅಂಟಾರ್ಟಿಕಾ ತಲುಪಿದ ಮೊದಲ ಮಹಿಳಾ ಅರಣ್ಯಾಧಿಕಾರಿ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ದೀಪ್ ಜೆ. ಕಂಟ್ರಾಕ್ಟರ್ ಅವರು ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

‘ಇಂಥದೊಂದು ಸಾಧನೆಯನ್ನು ನಾನು ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಛಲವೊಂದಿದ್ದರೆ ಅಥವಾ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಕ್ಲಿಷ್ಟಕರವಾದ ಚಾರಣದಂತಹ ಸವಾಲುಗಳನ್ನು ಎದುರಿಸುವುದಕ್ಕೆ ಮುನ್ನ ಮಾನಸಿಕ ಹಾಗೂ ದೈಹಿಕವಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‌ಭಾರತೀಯ ಅರಣ್ಯ ಸರ್ವೇಕ್ಷಣೆ ಪ್ರಾದೇಶಿಕ ನಿರ್ದೇಶಕ ಎಚ್.ವೇಣುಪ್ರಸಾದ್ ಅವರು ‘ಕರ್ನಾಟಕದಲ್ಲಿ ವ್ಯಾಪಿಸಿರುವ ಅರಣ್ಯದಲ್ಲಿನ ಸವಾಲುಗಳು ಹಾಗೂ ಅದರ ಪರಿಣಾಮಗಳು’ ವಿಷಯದ ಕುರಿತು ‌ಉಪನ್ಯಾಸ ನೀಡಿದರು.

ADVERTISEMENT

‘ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಚಾಮುಂಡಿ ಬೆಟ್ಟ, ಚಿಕ್ಕನಾಯಕನಹಳ್ಳಿ ಹಾಗೂ ಸರಗೂರು ಭಾಗದಲ್ಲಿ ಅರಣ್ಯ ಪ್ರದೇಶ ವೃದ್ಧಿಸಿದೆ ಮತ್ತು ಬದಲಾವಣೆಗಳೇನೂ ಆಗಿಲ್ಲ. ಇದಕ್ಕೆ ಆ ಭಾಗದಲ್ಲಿನ ಜನರ ಸಹಕಾರ ಕಾರಣ. ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಮತ್ತಷ್ಟು ಅತ್ಯುತ್ತಮ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪ‍ಡಿಸಿದರು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಎಂ.ಕುಲಕರ್ಣಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಮೃಗಾಲಯ ಶಿಕ್ಷಣ ಅಧಿಕಾರಿ ಎಂ.ಎಸ್. ಸುಜೋಶ ಭಾಗವಹಿಸಿದ್ದರು.

ಕೋವಿಡ್–19 ಸಾಂಕ್ರಾಮಿಕದ ಸಂಕಷ್ಟ ನಿವಾರಣೆಯಾದ ನಂತರ ಮೃಗಾಲಯದಲ್ಲಿ ನಡೆದ ಮೊದಲ ‌ಉಪನ್ಯಾಸ ಕಾರ್ಯಕ್ರಮ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.