ADVERTISEMENT

ಅನಿಲ ದುರಂತ, ಕಾರ್ಮಿಕರ ರಕ್ಷಣೆ!

‘ಅಣಕು ಕಾರ್ಯಾಚರಣೆ’: ಎನ್‌ಡಿಆರ್‌ಎಫ್‌, ಅಗ್ನಿಶಾಮಕ ಸಿಬ್ಬಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:03 IST
Last Updated 1 ಜನವರಿ 2023, 6:03 IST
ಹೆಬ್ಬಾಳದಲ್ಲಿ ಶನಿವಾರ ನಡೆದ ‘ಅಣಕು ಕಾರ್ಯಾಚರಣೆ’ಯಲ್ಲಿ ಟ್ಯಾಂಕರ್‌ ಅನಿಲದಿಂದ ಅಸ್ವಸ್ಥರಾಗಿದ್ದ ಕಾರ್ಮಿಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಿಸಿದರು
ಹೆಬ್ಬಾಳದಲ್ಲಿ ಶನಿವಾರ ನಡೆದ ‘ಅಣಕು ಕಾರ್ಯಾಚರಣೆ’ಯಲ್ಲಿ ಟ್ಯಾಂಕರ್‌ ಅನಿಲದಿಂದ ಅಸ್ವಸ್ಥರಾಗಿದ್ದ ಕಾರ್ಮಿಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಿಸಿದರು   

ಮೈಸೂರು: ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಟ್ಯಾಂಕರ್‌ ಶನಿವಾರ ಬೆಳಿಗ್ಗೆ 11ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಕೊಳವೆ ಮಾರ್ಗ ನಿರ್ಮಿಸುತ್ತಿದ್ದ ಕಾರ್ಮಿಕರೆಡೆಗೆ ನುಗ್ಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯಿತು. ಆರು ಮಂದಿ ಗಾಯಗೊಂಡರು. ಮಿಂಚಿನ ವೇಗದಲ್ಲಿ ಧಾವಿಸಿದ ರಕ್ಷಣಾ ಪಡೆಯು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಗಾಯಾಳು ಕಾರ್ಮಿಕರನ್ನು ರಕ್ಷಿಸಿತು! ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ನೇತೃತ್ವದಲ್ಲಿ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಾಣೆ ಮದ್ರಾಸ್‌ ಕಾರ್ಖಾನೆ ಬಳಿ ನಡೆದ ‘ಅಣಕು ಕಾರ್ಯಾಚರಣೆ’ಯ ದೃಶ್ಯಗಳು ಇವು.

ಕಾರ್ಯಾಚರಣೆಯು ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಎಜಿ ಅಂಡ್ ಪಿ ಸಿಟಿ ಗ್ಯಾಸ್ ಪೈವೇಟ್‌ ಲಿಮಿಟೆಡ್‌ ಸಹಯೋಗದಲ್ಲಿ ನಡೆಯಿತು.

ದ್ರವೀಕೃತ ನೈಸರ್ಗಿಕ ಅನಿಲ ಹೊತ್ತಿದ್ದ ಟ್ಯಾಂಕರ್‌ ಎಜಿ ಅಂಡ್‌ ಪಿ ಸಿಟಿ ಗ್ಯಾಸ್ ಪೈವೇಟ್‌ ಲಿಮಿಟೆಡ್‌ನ ಸ್ಟೇಷನ್‌ಗೆ ಬಂದಾಗ ಕೊಳವೆ ಕಾಮಗಾರಿ ನಡೆಸುತ್ತಿದ್ದ ಕಡೆಗೆ ನುಗ್ಗಿತು. ಕಂಬಕ್ಕೆ ಡಿಕ್ಕಿ ಹೊಡೆದು ಅನಿಲ ಸೋರಿಕೆಯಾಯಿತು. ನೇರಳೆ ಬಣ್ಣ ಮೋಡ ನಿರ್ಮಾಣವಾಯಿತು. ರಾಸಾಯನಿಕ ದುರಂತ ತಪ್ಪಿಸಲು ಕಾರ್ಯಪಡೆ ಧಾವಿಸಿತು.

ADVERTISEMENT

ವಿದ್ಯುತ್‌ ವಿಭಾಗವು ವಿದ್ಯುತ್‌ ಸರಬರಾಜಿಗೆ ತಡೆಯಿಡ್ಡಿತು. ಅಗ್ನಿಶಾಮಕ ‍ದಳದವರು ಟ್ಯಾಂಕರ್‌ ತಂಪಾಗಿಸಲು ನೊರೆ ಸಿಂಪಡಣೆ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಂಬುಲೆನ್ಸ್‌ ಸ್ಥಳಕ್ಕೆ ಧಾವಿಸಿತು. ಪೊಲೀಸ್‌ ಹಾಗೂ ಸಂಚಾರ ಪೊಲೀಸರು ರಸ್ತೆಯತ್ತ ಬರದಂತೆ ಬ್ಯಾರಿಕೇಡ್‌ ಹಾಕಿದರು. ಹೂಟಗಳ್ಳಿ ನಗರಸಭೆಯು ಜಾಗೃತಿ ಕರೆಯನ್ನು ನಿವಾಸಿಗಳಿಗೆ ನೀಡಿತು. 12.50ರ ಸುಮಾರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಅಣಕು ಪ್ರದರ್ಶನ ಸಹಕಾರಿ: ‘ರಾಸಾಯನಿಕ ದುರಂತ ಜಿಲ್ಲೆಯಲ್ಲಿ ಜರುಗದಂತೆ ತಡೆಗಟ್ಟಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ತಿಳಿಯಲು ಅಣಕು ಪ್ರದರ್ಶನ ಸಹಕಾರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

‘ವಿಪತ್ತು ನಿರ್ವಹಣೆಯಲ್ಲಿ ಇಲಾಖೆಗಳ ಜವಾಬ್ದಾರಿ ಏನು? ಸಾರ್ವಜ ನಿಕರು ಯಾವ ಕ್ರಮ ಅನುಸರಿಸಬೇಕು ಎಂಬುದಕ್ಕೆ ಪೂರಕ ಮಾಹಿತಿಯನ್ನು ಪ್ರದರ್ಶನಗಳು ನೀಡುತ್ತವೆ’ ಎಂದು
ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ, ಕಾರ್ಖಾನೆಗಳ ಜಂಟಿ ನಿರ್ದೇಶಕ ಆರ್.ಕೆ.ಪಾರ್ಥಸಾರಥಿ, ಉಪ ನಿರ್ದೇಶಕ ಎಂ.ಎಸ್. ಮಹದೇವ್, ಸಹಾಯಕ ನಿರ್ದೇಶಕರಾದ ಉಮೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಅರುಣ್ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.