
ಪಿರಿಯಾಪಟ್ಟಣ: ತಾಲ್ಲೂಕಿನ ವಿವಿಧೆಡೆ ಮಹಾಶಿವರಾತ್ರಿ ಅಂಗವಾಗಿ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.
ಪಟ್ಟಣದ ಮಹದೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲೇ ಉದ್ಭವ ಮೂರ್ತಿ ಹಾಗೂ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಬಿಲ್ವಪತ್ರೆ ಪೂಜೆ, ರುದ್ರಾಭಿಷೇಕ ಸೇರಿದಂತೆ ವಿವಿಧ ವಿಧಿವಿಧಾನಗಳಿಂದ ಪೂಜಿಸಲಾಯಿತು. ಬೆಳಿಗ್ಗೆ 11.30ರ ವೇಳೆಗೆ ಮಹಾಮಂಗಳಾರತಿ ನೆರವೇರಿಸಿ ಬಳಿಕ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ವಿಶೇಷವಾಗಿ ಸಿಂಗರಿಸಲಾಗಿದ್ದ ರಥಕ್ಕೆ ಕೂರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು.
ಪಟ್ಟಣದ ವೈದ್ಯೇಶ್ವರ ದೇವಸ್ಥಾನ, ಬಸವೇಶ್ವರ, ವದ್ಲಿ ಬಸಪ್ಪ, ನೂರೊಂದು ಲಿಂಗೇಶ್ವರ, ಮಹದೇಶ್ವರ ಸ್ವಾಮಿಗೆ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಪಟ್ಟಣದ ವೈದ್ಯೇಶ್ವರ ಬಡಾವಣೆಯಲ್ಲಿರುವ ವೈದ್ಯೇಶ್ವರ ದೇವಾಲಯದ ಬ್ರಹ್ಮರಥೋತ್ಸವವು ಶಿವರಾತ್ರಿ ಮಾರನೆಯ ದಿನ ಜರುಗಲಿದ್ದು, ಇದರ ಅಂಗವಾಗಿ ಸಿದ್ಧತೆ ನಡೆಯಿತು. 3 ದಿನಗಳ ಕಾಲ ನಡೆಯುವ ಪೂರ್ಣಾಹುತಿ ಹೋಮಕ್ಕೆ ಸಿದ್ಧತೆಗಳು ನಡೆದವು.
ತಾಲ್ಲೂಕಿನ ಜಿ.ಬಸವನಹಳ್ಳಿ ಬಳಿಯಿರುವ ಗಂಗಾಧರ ಬಸವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಗುಡ್ಡದ ಮೇಲಿರುವ ದೇವಾಲಯದಲ್ಲಿನ ಶಿವಲಿಂಗದ ದರ್ಶನ ಪಡೆದರು. ದೇವಾಲಯದ ಭಕ್ತ ಮಂಡಳಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.