ಮೈಸೂರು: ಕೇಂದ್ರ ಮತ್ತು ರಾಜ್ಯದಲ್ಲಿ ನಿರ್ದಯ ಸರ್ಕಾರ ಅಸ್ತಿತ್ವದಲ್ಲಿದ್ದು, ಜನರು ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಗುರುವಾರ ಕೆ.ಹರೀಶ್ಗೌಡ ಬಳಗದ ವತಿಯಿಂದ ನಡೆದ ಪಕ್ಷದ ‘ಸಹಾಯಹಸ್ತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ಎಡವಿದ್ದರಿಂದಲೇ ಸಾವಿರಾರು ಮಂದಿ ಮೃತಪಟ್ಟರು. ಆಮ್ಲಜನಕದ ಕೊರತೆಯಿಂದ ಚಾಮರಾಜನಗರದಲ್ಲಿ ಹಲವು ಮಂದಿ ಮೃತಪಟ್ಟರೂ ಸರ್ಕಾರ ಕೇವಲ ಇಬ್ಬರು ಸತ್ತಿದ್ದಾರೆ ಎಂದು ಹುಸಿಯಾಡಿತು. ನ್ಯಾಯಾಲಯ ಹೇಳುವವರೆಗೂ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಿಲ್ಲ ಎಂದು ಹರಿಹಾಯ್ದರು.
ಬೇರೆಲ್ಲ ದೇಶಗಳು ಮೊದಲು ಲಸಿಕೆಗೆ ಆದ್ಯತೆ ನೀಡಿ, ತಮ್ಮ ಪ್ರಜೆಗಳಿಗೆ ನೀಡಿದವು. ಆದರೆ, ನಮ್ಮ ಕೇಂದ್ರ ಸರ್ಕಾರ ತೋರಿದ ನಿರ್ಲಕ್ಷ್ಯ ಧೋರಣೆಯಿಂದಕೋವಿಡ್ನಿಂದ ಹೆಚ್ಚು ಸಾವು ನಮ್ಮ ದೇಶದಲ್ಲೇ ಸಂಭವಿಸಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಪ್ರೇರಣೆಯಿಂದ ಸೇವಾ ಕಾರ್ಯ– ಕೆ.ಹರೀಶ್ಗೌಡ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರೇರಣೆಯಿಂದ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ ಕೆ.ಹರೀಶ್ಗೌಡ ತಿಳಿಸಿದರು.
‘ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಕೋವಿಡ್ನಿಂದ 150 ಮಂದಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಇವರಿಗೆ ತಲಾ ₹ 10 ಸಾವಿರ ಪರಿಹಾರಧನ ವಿತರಿಸುತ್ತಿದ್ದೇನೆ. ಮುಂದೆಯೂ ಇವರ ಕಷ್ಟಕಾಲದಲ್ಲಿ ನೆರವು ನೀಡಲಾಗುವುದು. ನನ್ನಲ್ಲಿ ₹ 10 ಇದ್ದರೆ, ₹ 5ನ್ನು ಸೇವಾ ಕಾರ್ಯಗಳಿಗೆ ನೀಡುತ್ತೇನೆ’ ಎಂದರು.
ಚಾಮರಾಜ ವಿಧಾನಸಭಾ ವ್ಯಾಪ್ತಿಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಒಟ್ಟು 150 ಕುಟುಂಬಗಳಿಗೆ ತಲಾ ₹ 10 ಸಾವಿರ ಪರಿಹಾರ ಧನವನ್ನು ಅವರು ಇದೇ ವೇಳೆ ಅವರು ವಿತರಿಸಿದರು.
ಪಕ್ಷದ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್, ಮುಖಂಡರಾದ ಕೆ.ಮರೀಗೌಡ, ಅಯೂಬ್ಖಾನ್, ನಾಗಭೂಷಣ್, ಸುನಿಲ್ ಬೋಸ್, ಪ್ರಕಾಶ್, ಶಿವಮಲ್ಲು, ರೋಹಿತ್, ನಟರಾಜ್, ಚಂದ್ರಶೇಖರ, ರಮೇಶ್, ಗೋಪಿ, ಶಿವಕುಮಾರ್, ಶ್ರೀನಿವಾಸ್, ಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.