ADVERTISEMENT

ನಂಜನಗೂಡು: ಒಂದು ಗುಂಟೆ ಜಾಗಕ್ಕಾಗಿ ಕೊಲೆ!

ಧಾರಾವಾಹಿ ಫ್ಲೆಕ್ಸ್‌ಗೆ ಬೆಂಕಿದ ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:02 IST
Last Updated 18 ಏಪ್ರಿಲ್ 2021, 4:02 IST

ನಂಜನಗೂಡು: ತಾಲ್ಲೂಕಿನ ಆಲಂಬೂರು ಗ್ರಾಮದಲ್ಲಿಸಿದ್ದರಾಜು (35) ಎಂಬಾತ, ಒಂದು ಗುಂಟೆ ಜಾಗದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಚಿಕ್ಕಪ್ಪ‌ ಲಕ್ಷ್ಮಯ್ಯ (50) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ, ಈತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿತ್ರಾರ್ಜಿತ ಜಮೀನನ್ನು ತಲಾ 18 ಗುಂಟೆ ಭಾಗ ಮಾಡಿ ಅಣ್ಣ ತಮ್ಮಂದಿರ ನಡುವೆ ಹಂಚಲಾಗಿತ್ತು. ಈ ಪೈಕಿ ಲಕ್ಷ್ಮಯ್ಯ ಅವರಿಗೆ ಒಂದು ಗುಂಟೆ ಜಮೀನು ಹೆಚ್ಚಾಗಿ ಸೇರ್ಪಡೆಗೊಂಡಿತ್ತು. ಜಮೀನು ಮಾರಾಟ ಮಾಡಿದ್ದ ಲಕ್ಷ್ಮಯ್ಯ ಅವರಿಂದ ಇವರ ಸೋದರ ರಾಜು ಅವರ ಪುತ್ರ ಸಿದ್ದರಾಜು ಒಂದು ಗುಂಟೆ ಜಮೀನಿನ ಹಣ ಕೇಳಿದ್ದಾರೆ. ಇದಕ್ಕಾಗಿ ಗ್ರಾಮದಲ್ಲಿ ಪಂಚಾಯ್ತಿಯೂ ನಡೆದಿದೆ. ಈ ವೇಳೆ ಕೋಪಗೊಂಡ ಸಿದ್ದರಾಜು ಚಾಕುವಿನಿಂದ ಇರಿದು ಕೊಲೆ ಮಾಡಿದ ಎಂದು ಅವರು ಹೇಳಿದ್ದಾರೆ.

ಇಬ್ಬರ ಬಂಧನ
ಪಿರಿಯಾಪಟ್ಟಣ:
ತಾಲ್ಲೂಕಿನ ಬೆಳತೂರು ಗ್ರಾಮದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಧಾರಾವಾಹಿ ‘ಮಹಾನಾಯಕ’ ಫ್ಲೆಕ್ಸ್‌ಗೆ ಏ.13ರ ರಾತ್ರಿ ಬೆಂಕಿ ಹಚ್ಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಗ್ರಾಮದ ನವೀನ್ (30) ಹಾಗೂ ಗಿರೀಶ್ (35) ಬಂಧಿತರು. ಇವರಿಗೂ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದ ಗುಂಪಿಗೂ ಈ ಹಿಂದೆ ಗಲಾಟೆ ನಡೆದಿತ್ತು. ಮದ್ಯ ಸೇವಿಸಿದ್ದ ಇವರು ಅಂದು ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ್ದರಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.