
ಮೈಸೂರು: ನಗರದ ಜಯಲಕ್ಷ್ಮೀಪುರಂನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶುಕ್ರವಾರದಿಂದ ಎರಡು ದಿನಗಳವರೆಗೆ ಹಮ್ಮಿಕೊಂಡಿದ್ದ ‘ಮಹಾಪ್ರಯೋಗ ಉತ್ಸವ–2026’ ವಿಜ್ಞಾನ ವಸ್ತುಪ್ರದರ್ಶನ ಗಮನಸೆಳೆಯಿತು.
ಭಾರತೀಯ ವಿಜ್ಞಾನ ರಂಗದ ಧ್ರುವತಾರೆ ಸರ್ ಸಿ.ವಿ. ರಾಮನ್ ಅವರಿಗೆ ಗೌರವ ಸಲ್ಲಿಸಲಾಯಿತು. ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕವೂ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಪಿ., ಪರಿಸರವಾದಿ ವಸಂತಕುಮಾರ್ ಮೈಸೂರು, ಮೈಸೂರು ವಿ.ವಿ. ಸಂದರ್ಶಕ ಪ್ರಾಧ್ಯಾಪಕ ಜಿ. ಸುಬ್ರಹ್ಮಣ್ಯ ಮತ್ತು ಗಣಿತ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಸ್. ಭಾರ್ಗವ, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಎಸ್.ಆರ್. ರಮೇಶ್ ನಿರ್ಣಾಯಕರಾಗಿ ಪಾಲ್ಗೊಂಡು ಪ್ರದರ್ಶನವನ್ನು ಉದ್ಘಾಟಿಸಿದರು.
ಮಾದರಿ ಮತ್ತು ಪೋಸ್ಟರ್ ವಿಭಾಗದಲ್ಲಿ 205 ವಿದ್ಯಾರ್ಥಿಗಳು 60 ಮಾದರಿ, 58 ಪೋಸ್ಟರ್ಗಳನ್ನು ಸಿದ್ಧಪಡಿಸಿ ಪ್ರತಿಭೆ ಪ್ರದರ್ಶಿಸಿದರು.
ಬಹುಮಾನ ಪಡೆದವರು: ಭೌತವಿಜ್ಞಾನ: ‘ಸೂರ್ಯನನ್ನು ಹಿಂಬಾಲಿಸುವ ಸೌರಶಕ್ತಿ ವ್ಯವಸ್ಥೆ’ ಮಾದರಿ ಪ್ರಸ್ತುತಪಡಿಸಿದ ಅರ್ಪಿತಾ ಎಂ.ಆರ್., ಮಾಲಾ ಮತ್ತು ಸಿದ್ಧಾರ್ಥ ಸಿ. ಪ್ರಥಮ ಸ್ಥಾನ ಪಡೆದರು.
ಜೀವವಿಜ್ಞಾನ: ಮೋಹನ ಪ್ರಿಯ, ನಮ್ರತಾ ಮತ್ತು ಜೀವಿತಾ ಮಂಡಿಸಿದ ‘ಸಿಆರ್ಐಎಸ್ಪಿಆರ್/ ಸಿಎಎಸ್ 9’ ಪ್ರಥಮ ಬಹುಮಾನ ಗಳಿಸಿತು.
ಕಂಪ್ಯೂಟರ್ ಅಪ್ಲಿಕೇಶನ್: ಎಡ್ವಿನ್ ಸೊಲೊಮನ್ ಜೆ. ಮತ್ತು ಆಶಿಕ್ ಒ.ಕೆ. ಅಭಿವೃದ್ಧಿಪಡಿಸಿದ ‘ವಿಷನ್ ಅಸಿಸ್ಟ್: ದೃಷ್ಟಿದೋಷವುಳ್ಳವರಿಗೆ ಎಐ ಸಿಸ್ಟಮ್’ ಗಮನಸೆಳೆಯಿತು.
ಮಾನವಿಕ ವಿಭಾಗ: ಎಂ.ಕೆ. ಸ್ಪಂದನಾ ಮತ್ತು ಮೋನಿಕಾ ಬಿ. ತಯಾರಿಸಿದ್ದ ‘ನಗರ ಶಾಖ ತಗ್ಗಿಸುವಿಕೆ’ ಮಾದರಿಯು ಮೊದಲ ಬಹುಮಾನ ಗೆದ್ದುಕೊಂಡಿತು.
ಪೋಸ್ಟರ್ ಪ್ರದರ್ಶನ: ಭೌತವಿಜ್ಞಾನದಲ್ಲಿ ‘ರಾಮನ್ ಎಫೆಕ್ಟ್ ಹಿಂದಿನ ಗಣಿತ’ ಕುರಿತು ಬುದ್ಧಪ್ರಕಾಶ್ ಮತ್ತು ಆದಿತ್ಯ ಜಿ.ಎನ್. ಪ್ರಥಮ ಸ್ಥಾನ ಗಳಿಸಿದರು.
ಜೀವವಿಜ್ಞಾನ: ವಿಶ್ವಾಸ್ ಮತ್ತು ಸಿದ್ದರಾಮ ‘ವೈರಸ್ಗಳು: ಸಾಂಕ್ರಾಮಿಕದಿಂದ ಭರವಸೆಯವರೆಗೆ’ ಎಂಬ ವಿಷಯ ಪ್ರಸ್ತುತಪಡಿಸಿ ಮೊದಲ ಬಹುಮಾನ ತಮ್ಮದಾಗಿಸಿಕೊಂಡರು.
ಕಂಪ್ಯೂಟರ್ ಅಪ್ಲಿಕೇಶನ್: ಸಾನಿಕಾ ಎಸ್., ಸುಜಲ್ ಪೊದ್ದಾರ್ ಮತ್ತು ಭಾನುಪ್ರಿಯ (ಗಾರ್ಡಿಯನ್ಸ್ ಆಫ್ ಡಿಜಿಟಲ್ ರಿಯಲ್ಮ್) ಹಾಗೂ ಮಾನವಿಕ ವಿಭಾಗದಲ್ಲಿ ಸುಮಂತ್ ರಾಜ್ ಡಿ.ಎಸ್. ಮತ್ತು ಅಂಕಿತಾ ಆರ್. ವಿಜೇತರಾದರು.
ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಈ ವೇಳೆ ಮಾತನಾಡಿದ ಪ್ರಾಂಶುಪಾಲೆ ಬಿ.ಆರ್. ಜಯಕುಮಾರಿ, ‘ವಿದ್ಯಾರ್ಥಿಗಳು ತರ್ಕಬದ್ಧವಾಗಿ ಆಲೋಚಿಸುವಂತೆ, ನಾವೀನ್ಯತೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವಂತೆ ಉತ್ತೇಜಿಸುವ ಆಶಯದೊಂದಿಗೆ ಸ್ಪರ್ಧೆ ನಡೆಸಲಾಯಿತು’ ಎಂದರು.
‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬೇಕೆಂದರೆ ಪ್ರಚಲಿತ ವಿದ್ಯಮಾನಗಳಿಗೆ ತಕ್ಕಂತೆ ಅಪ್ಡೇಟ್ ಆಗುತ್ತಿರಬೇಕು. ಈ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿವೆ’ ಎಂದು ಹೇಳಿದರು.
ಸಂಯೋಜಕರಾದ ಪೂರ್ಣಿಮಾ ಎಸ್. ಮತ್ತು ಸುಮತಿ ಎಂ.ಪಿ. ಮಾತನಾಡಿದರು. ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮೀ ಮುರಳೀಧರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.