ಸಿಎಂ ಸಿದ್ದರಾಮಯ್ಯ
ಮೈಸೂರು: ‘ಜಿಲ್ಲೆಯ ಸರಗೂರು ತಾಲ್ಲೂಕು ಬಡಗಲಪುರದಲ್ಲಿ ಹುಲಿ ದಾಳಿಗೆ ಒಳಗಾದ ಕೃಷಿಕ ಮಹದೇವ (ಮಾದೇಗೌಡ) ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಪರಿಹಾರದ ಸಂಪೂರ್ಣ ಮೊತ್ತ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹದೇವ ಅವರ ಕುಟುಂಬದವರೊಂದಿಗೆ ಶುಕ್ರವಾರ ಚರ್ಚಿಸಿದ ಬಳಿಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ಆ ವ್ಯಕ್ತಿಗೆ ಮತ್ತೆ ದೃಷ್ಟಿ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಬದುಕು ಕಳೆದುಕೊಂಡ ಹಾಗೂ ಕುಟುಂಬದ ಆಸರೆ ಕಳೆದುಕೊಂಡವರ ಲೆಕ್ಕದಲ್ಲಿ ಪರಿಹಾರ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಸೂಚಿಸಿದರು.
ಮಹದೇವ ಅವರು ಗುರುವಾರ ಜಮೀನಿನಲ್ಲಿ ಹತ್ತಿ ಬಿಡಿಸುವಾಗ ಹುಲಿ ದಾಳಿ ನಡೆಸಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಒಂದು ವಾರದಿಂದ ಹುಲಿ ಕಾಣಿಸಿಕೊಂಡು ನಿವಾಸಿಗಳಿಗೆ ಆತಂಕವಾಗಿತ್ತು. ಗ್ರಾಮಸ್ಥರ ಮನವಿ ಆಧರಿಸಿ ಹುಲಿ ಸೆರೆಗೆ ‘ಭೀಮ’ ಮೊದಲಾದ ಕಾಡಾನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ, ಹುಲಿ ಜಮೀನಿನತ್ತ ನುಗ್ಗಿದ್ದು ಕೆಲಸ ಮಾಡುತ್ತಿದ್ದ ಮಹದೇವ ಅವರ ಮೇಲೆ ದಾಳಿ ಮಾಡಿತ್ತು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.