ಮೈಸೂರು ವಿಶ್ವವಿದ್ಯಾಲಯದಿಂದ ‘ಸಿದ್ದರಾಮಯ್ಯ 75 ಅಮೃತ ಮಹೋತ್ಸವ’ ಚಿನ್ನದ ಪದಕ ಪಡೆದ ಬೆಂಗಳೂರಿನ ಪ್ರತೀಕ್ಷಾ ಪಾವಸ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ರಮೇಶ್ ಬಂಡಿಸಿದ್ದೇಗೌಡ, ಬಿ.ಜೆ. ವಿಜಯ್ಕುಮಾರ್ ಜೊತೆಗಿದ್ದರು
ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಎಲ್ಎಲ್ಬಿ ಐದು ವರ್ಷದ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ‘ಸಿದ್ದರಾಮಯ್ಯ–75 ಅಮೃತ ಮಹೋತ್ಸವ’ ಚಿನ್ನದ ಪದಕ ನೀಡುತ್ತಿದ್ದು, ಈ ವರ್ಷ ಬೆಂಗಳೂರಿನ ಪ್ರತೀಕ್ಷಾ ಪಾವಸ್ಕರ್ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಜ. 18ರಂದು ನಡೆದ ಘಟಿಕೋತ್ಸವದಲ್ಲಿ ಪ್ರತೀಕ್ಷಾ ಚಿನ್ನದ ಪದಕ ಪಡೆದಿದ್ದರು. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿನ ತಮ್ಮ ನಿವಾಸದಲ್ಲಿ ಈಚೆಗೆ ಅಭಿನಂದಿಸಿದರು.
‘ನನ್ನ ಹೆಸರಿನಲ್ಲಿ ಚಿನ್ನದ ಪದಕದ ದತ್ತಿ ನೀಡಿದ್ದು ಗೊತ್ತಿರಲಿಲ್ಲ. ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಈ ಕಾರ್ಯ ಶ್ಲಾಘನೀಯ’ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ರೈಲ್ವೆ ನಿಲ್ದಾಣದ ಪಕ್ಕದ ಖಾಲಿ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮಾರ್ಚ್ 15ರಂದು ಶಂಕುಸ್ಥಾಪನೆ ನೆರವೇರಿಸುವುದಾಗಿ ಮಾಹಿತಿ ನೀಡಿದರು.
‘ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಶಾಶ್ವತ ಚಿನ್ನದ ದತ್ತಿ ನೀಡುವ ನಿರ್ಣಯವನ್ನು 2022ರಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಂಗೀಕರಿಸಿತ್ತು. 2022–23ನೇ ಸಾಲಿನಲ್ಲಿ ಈ ದತ್ತಿ ಸ್ಥಾಪಿಸಿದ್ದು, ಮೊದಲ ವರ್ಷ ಶ್ರೀರಂಗಪಟ್ಟಣದ ವಿನಯ್ ಪದಕ ಪಡೆದಿದ್ದರು’ ಎಂದು ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಹರೀಶ್ ಗೌಡ, ರಮೇಶ್ ಬಂಡಿ ಸಿದ್ದೇಗೌಡ, ಎಆರ್. ಕೃಷ್ಣಮೂರ್ತಿ, ಮಾಜಿ ಸಚಿವ ಕೋಟೆ ಶಿವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.