ADVERTISEMENT

ಮೈಸೂರು: ‘ಖಾತೆ ಅರ್ಜಿಗಳ ವಿಲೇವಾರಿ ಮಾಡಿ’

ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 5:01 IST
Last Updated 5 ಡಿಸೆಂಬರ್ 2025, 5:01 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಮೈಸೂರು: ‘ಸಕಾರಣವಿಲ್ಲದೆ ಬಾಕಿ ಉಳಿಸಿಕೊಂಡಿರುವ ಖಾತೆ ಅರ್ಜಿಗಳನ್ನು 15 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಜನರು ಕಚೇರಿಗೆ ಅಲೆಯುವಂತೆ ಮಾಡದೆ ನಿಗದಿತ ಸಮಯದಲ್ಲಿ ಸ್ಪಂದಿಸಬೇಕು’ ಎಂದು ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.

ತಾಲ್ಲೂಕಿನ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ, ಮನೆಗಳ ಖಾತೆಗಾಗಿ ಅರ್ಜಿ ಸಲ್ಲಿಸಿ ಸುಮಾರು ದಿನಗಳಾಗಿವೆ. ಇನ್ನೂ 399 ಅರ್ಜಿ ಖಾತೆಗಾಗಿ ಬಾಕಿ ಉಳಿದಿದೆ. ಅಧಿಕಾರಿಗಳು ಮೂಲ ದಾಖಲೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು’ ಎಂದರು.

‘ಖಾತೆ ಮಾಡಿಕೊಡದಿದ್ದರೆ ಸಾರ್ವಜನಿಕರು ಪರಿತಪಿಸುತ್ತಾರೆ. ಇದರಲ್ಲಿ ವಿಳಂಬ, ನಿರ್ಲಕ್ಷ್ಯ ಸಲ್ಲದು. ಆ ರೀತಿ ಮಾಡುವವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ರಮ್ಮನಹಳ್ಳಿಯನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಲಾಗಿದೆ. ಈಗ ಗ್ರೇಡ್-1 ಮೈಸೂರು ರಚನೆಯಾಗಲಿದೆ. ಇಲ್ಲಿನ ಸಂಪೂರ್ಣ ವಿಚಾರಗಳ ಬಗ್ಗೆ ಪಟ್ಟಿ ತಯಾರಿಸಿ, ಮುಂದಿನ ಸಭೆಯಲ್ಲಿ ಮಂಡಿಸಬೇಕು’ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

‘ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮ, ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ₹ 10 ಕೋಟಿ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ಪೈಪ್‌ಲೈನ್, ಚರಂಡಿ ಕಾಮಗಾರಿಯನ್ನು ಟೆಂಡರ್ ಮುಗಿದ ತಕ್ಷಣವೇ ಪ್ರಾರಂಭಿಸಬೇಕು. ಕಾವೇರಿ ನದಿ ನೀರು ಒದಗಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಗಮನಹರಿಸಲಾಗಿದೆ. ಉಂಡುವಾಡಿ ಯೋಜನೆಯಿಂದ ಕುಡಿಯುವ ನೀರು ಯೋಜನೆ ಆರಂಭವಾದರೆ ದಿನದ 24 ಗಂಟೆಯೂ ನೀರು ದೊರೆಯಲಿದೆ’ ಎಂದರು.

‘ರಮ್ಮನಹಳ್ಳಿಯನ್ನು ಗ್ರೇಡ್- 1 ಮೈಸೂರು ಪಾಲಿಕೆಗೆ ಸೇರಿಸಿದ ನಂತರ ಖಾತೆ ಸೇರಿದಂತೆ ಎಲ್ಲ ಸಮಸ್ಯೆ ಪರಿಹರಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿ.ಪ್ರಿಯದರ್ಶಿನಿ, ಆಡಳಿತಾಧಿಕಾರಿ ಮಹೇಶ್ ಕುಮಾರ್, ಮುಖ್ಯಾಧಿಕಾರಿ ಎಸ್.ಎನ್.ರವಿಕೀರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.