
ಮೈಸೂರು: ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಹುಲಿ ಸೆರೆಗೆ ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಬುಧವಾರವೂ ಮುಂದುವರಿಸಿದೆ.
ಜ.5ರಂದು ಬೆಳಿಗ್ಗೆ 6.30ಕ್ಕೆ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡಿದ್ದರಿಂದ ಕಾರ್ಯಪ್ರವೃತ್ತವಾದ ಇಲಾಖೆಯು ಚಿರತೆ ಕಾರ್ಯಪಡೆ ಮತ್ತು ಆನೆ ಕಾರ್ಯಪಡೆಯ ನೂರಕ್ಕೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಹುಲಿ ಪತ್ತೆಗೆ ಹುಡುಕಾಟ ನಡೆಸಿದೆ.
‘ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಹುಲಿ ಕಾಣಿಸಿಕೊಂಡಿರುವುದು ದೃಢಪಟ್ಟಿದ್ದು, ಆವರಣದಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದೆ’ ಎಂದು ಡಿಸಿಎಫ್ ಕೆ.ಪರಮೇಶ್ ತಿಳಿಸಿದ್ದಾರೆ.
‘ಕಾಂಪೌಂಡ್ ಸುತ್ತಲೂ ಪರಿಶೀಲಿಸಿದಾಗ ನಿಲ್ದಾಣದ ತಂತಿ ಬೇಲಿಯನ್ನು ಹುಲಿ ಹಾರಿ ಹೋಗಿದೆ. ಅಲ್ಲಿನ ಕೂದಲು, ರಕ್ತದ ಕಲೆಗಳನ್ನು ಪರಿಶೀಲಿಸಿದ ಪಶುವೈದ್ಯಾಧಿಕಾರಿಗಳು ಹುಲಿಯದ್ದೆಂದು ಖಚಿತಪಡಿಸಿದ್ದಾರೆ’ ಎಂದಿದ್ದಾರೆ.
‘ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು 5–6 ತಂಡವಾಗಿ ವಿಂಗಡಿಸಿ, ಹುಲಿಗಾಗಿ ಹುಡುಕಾಟ ನಡೆಸಿದಾಗ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿ ಹೆಜ್ಜೆ ಗುರುತುಗಳು ಸಿಕ್ಕಿವೆ. ಥರ್ಮಲ್ ಡ್ರೋನ್ ಮೂಲಕ ಪರಿಶೀಲನೆಯನ್ನು ಮುಂದುವರಿಸಿದ್ದು, ಇದುವರೆಗೂ ಹುಲಿ ಕಂಡು ಬಂದಿಲ್ಲ’ ಎಂದು ಹೇಳಿದ್ದಾರೆ.
‘ನಿಲ್ದಾಣದಲ್ಲಿ ವಾಕ್ಥ್ರೂ ಬೋನು ಇರಿಸಲಾಗಿದೆ. ಟಿವಿಎಸ್ ಕಾರ್ಖಾನೆ ಬಳಿ ಕುರುಹು ಕಂಡು ಬಂದಿಲ್ಲ. ಸೆರೆ ಕಾರ್ಯಾಚರಣೆಗೆ ಕುಮ್ಕಿ ಆನೆಗಳನ್ನು ಕರೆಸಲಾಗಿದ್ದು, ಇಲವಾಲದ ಅಲೋಕ ಅರಮನೆ ಆವರಣದಲ್ಲಿ ಇರಿಸಲಾಗಿದೆ. ನಾಗರಿಕರು ಅನವಶ್ಯಕ ವದಂತಿಗಳಿಗೆ ಕಿವಿಗೊಡಬಾರದು. ಹುಲಿ ಕಾರ್ಯಾಚರಣೆ ಮುಗಿಯುವವರೆಗೆ ರಾತ್ರಿ ವೇಳೆ ಓಡಾಡಬಾರದು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಮೈಸೂರು ಸುತ್ತಮುತ್ತ ಸುಮಾರು 20 ಹುಲಿಗಳಿರುವುದಾಗಿ ಅರಣ್ಯ ಇಲಾಖೆಯು ಅಂದಾಜಿಸಿದೆ. 2024ರ ಜ.28ರಂದು ಮಂಡಕಳ್ಳಿ ವಿಮಾನ ನಿಲ್ದಾಣ ಎದುರಿನ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದು, ರಸ್ತೆ ದಾಟುತ್ತಿದ್ದ 2 ವರ್ಷದ ಗಂಡು ಹುಲಿ ಸ್ಥಳದಲ್ಲೇ ಮೃತಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.