ADVERTISEMENT

ಮೈಸೂರು | ಬಿಎಂಸಿಸಿ ವ್ಯಾಪ್ತಿಗೆ ಸೇರಿಸದ್ದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:02 IST
Last Updated 5 ಫೆಬ್ರುವರಿ 2026, 4:02 IST
ಬೃಹತ್‌ ಮೈಸೂರು ಮಹಾನಗರಪಾಲಿಕೆ ಹೋರಾಟ ಸಮಿತಿಯಿಂದ ಆಕ್ಷೇಪಣೆ ಸಲ್ಲಿಸಲಾಯಿತು
ಬೃಹತ್‌ ಮೈಸೂರು ಮಹಾನಗರಪಾಲಿಕೆ ಹೋರಾಟ ಸಮಿತಿಯಿಂದ ಆಕ್ಷೇಪಣೆ ಸಲ್ಲಿಸಲಾಯಿತು   

ಮೈಸೂರು: ನಗರಕ್ಕೆ ಸಮೀಪದಲ್ಲಿರುವ ವರುಣ ಹೋಬಳಿಯ ಪ್ರದೇಶಗಳನ್ನು ಬೃಹತ್‌ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ) ವ್ಯಾಪ್ತಿಗೆ ಸೇರಸದಿರುವುದಕ್ಕೆ ಆಕ್ಷೇಪ ಸಲ್ಲಿಸಲಾಗಿದೆ.

ಇದಕ್ಕಾಗಿ ರಚಿಸಿಕೊಂಡಿರುವ ‘ಬೃಹತ್ ಮೈಸೂರು ಹೋರಾಟ ಸಮಿತಿ’ಯ ವತಿಯಿಂದ ಅಧಿಕೃತ ಆಕ್ಷೇಪಣೆ ಪತ್ರವನ್ನು ಅಂಚೆಯ ಮೂಲಕ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರಿಗೆ ರವಾನಿಸಲಾಯಿತು.

ಮೈಸೂರು ನಗರದ ಪೂರ್ವ ಭಾಗದ ವರುಣ ಹೋಬಳಿಯ ವರುಣ ಗ್ರಾಮ ಪಂಚಾಯಿತಿ, ಮೋಸಂಬಾಯನಹಳ್ಳಿ ಗ್ರಾಮ ಪಂಚಾಯಿತಿ, ವಾಜಮಂಗಲ ಗ್ರಾಮ ಪಂಚಾಯಿತಿ, ದೇವಲಾಪುರ ಗ್ರಾಮ ಪಂಚಾಯಿತಿ ಹಾಗೂ ಇದಕ್ಕೆ ಒಳಪಡುವ ಗ್ರಾಮಗಳು, ಬಡಾವಣೆಗಳನ್ನು ಸೇರಿಸುವಂತೆ ಕೋರಲಾಗಿದೆ.

ADVERTISEMENT

ಆಕ್ಷೇಪಣೆ ಪತ್ರದ ಜೊತೆಗೆ ವರುಣ ಹೋಬಳಿಯ ಭಾಗದ 68 ಬಡಾವಣೆಗಳ ಪಟ್ಟಿಯನ್ನು ನೂರಾರು ಜನರ ಸಹಿಯೊಂದಿಗೆ ಸಲ್ಲಿಸಲಾಯಿತು.

ಬೃಹತ್ ಮೈಸೂರು ಹೋರಾಟ ಸಮಿತಿಯ ಸದಸ್ಯರಾದ ಶರತ್ ಪುಟ್ಟಬುದ್ದಿ, ಜಿಲ್ಲಾ ಪಂಚಾಯಿತಿ ನಿವೃತ್ತ ಸಿಇಒ ಶಿವಕುಮಾರ್, ಮೈಸೆಂ ಎಂಜಿನಿಯರಿಂಗ್ ಕಾಲೇಜಿನ ಟ್ರಸ್ಟಿ ಕಿಶೋರ್ ಬಿದ್ದಪ್ಪ, ಪ್ರವೀಣ್, ಸಿದ್ಧಾರ್ಥ, ಲೋಹಿತ್, ಪುಟ್ಟಸ್ವಾಮಿ, ನರಸಯ್ಯ, ಸುಬ್ಬಣ್ಣ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.