ADVERTISEMENT

ಮೈಸೂರು | ಲೋಡ್‌ಶೆಡ್ಡಿಂಗ್‌ ತಪ್ಪಿಸಿ; ಸೇವೆ ಉತ್ತಮಗೊಳಿಸಿ: ಪಿ. ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:04 IST
Last Updated 17 ಫೆಬ್ರುವರಿ 2026, 4:04 IST
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸೆಸ್ಕ್‌ ಆಯೋಜಿಸಿದ್ದ ಸಾರ್ವಜನಿಕ ದೂರು ವಿಚಾರಣೆ ಸಭೆಯಲ್ಲಿ ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ್, ಸದಸ್ಯ ಎಚ್‌.ಕೆ ಜಗದೀಶ್‌, ಸೆಸ್ಕ್‌ ಎಂ.ಡಿ. ಮುನಿಗೋಪಾಲರಾಜು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸೆಸ್ಕ್‌ ಆಯೋಜಿಸಿದ್ದ ಸಾರ್ವಜನಿಕ ದೂರು ವಿಚಾರಣೆ ಸಭೆಯಲ್ಲಿ ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ್, ಸದಸ್ಯ ಎಚ್‌.ಕೆ ಜಗದೀಶ್‌, ಸೆಸ್ಕ್‌ ಎಂ.ಡಿ. ಮುನಿಗೋಪಾಲರಾಜು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ   

ಮೈಸೂರು: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡುವಲ್ಲಿ ಆಗುತ್ತಿರುವ ತಾರತಮ್ಯ ತಪ್ಪಿಸಿ, ಲೋಡ್‌ಶೆಡ್ಡಿಂಗ್‌ನಿಂದ ಬೆಳೆನಷ್ಟವಾದಲ್ಲಿ ಪರಿಹಾರ ನೀಡಿ, ಸಿಸಿ/ ಒ.ಸಿ. ಇಲ್ಲದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಿ...

ಇದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ಆಯೋಜಿಸಿದ್ದ ವಾರ್ಷಿಕ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಕೇಳಿಬಂದ ಬೇಡಿಕೆಗಳು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನರು ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದ ಸೇವೆಯಲ್ಲಿ ಆಗುತ್ತಿರುವ ವ್ಯತ್ಯಯಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದು, ಪರಿಹಾರಕ್ಕೆ ಆಗ್ರಹಿಸಿದರು.

ADVERTISEMENT

‘ಕೃಷಿ ವಲಯವು ದೇಶದ ಬಹುದೊಡ್ಡ ಕಾರ್ಖಾನೆ. ಕೋವಿಡ್ ಸಂದರ್ಭದಲ್ಲೂ ರೈತ ಬೆಳೆ ಬೆಳೆಯುವುದನ್ನು ನಿಲ್ಲಿಸಲಿಲ್ಲ. ಹೀಗಿರುವಾಗ ಕೈಗಾರಿಕೆಗಳಿಗೆ ಇಲ್ಲದ ಲೋಡ್‌ಶೆಡ್ಡಿಂಗ್‌ ಕೃಷಿ ಜಮೀನಿಗೆ ಮಾತ್ರ ಏಕೆ’ ಎಂದು ರೈತರು ಪ್ರಶ್ನಿಸಿದರು.

ಚಾಮರಾಜನಗರದ ರೈತ ಮುಖಂಡ ಶಿವಲಿಂಗ ಪ್ರಸಾದ್ ಮಾತನಾಡಿ, ‘ಹನೂರು ಭಾಗದಲ್ಲಿ ಎಕ್ಸ್‌ಪ್ರೆಸ್ ಲೈನ್‌ ಕಾಮಗಾರಿ ನೆಪದಲ್ಲಿ ಏಕಾಏಕಿ ವಿದ್ಯುತ್‌ ಕಡಿತ ಮಾಡಲಾಗಿದೆ. ಇದರಿಂದ ಕೊಳವೆಬಾವಿ ನೀರು ಆಧರಿಸಿ ಕೃಷಿ ಮಾಡುತ್ತಿರುವ ರೈತರಿಗೆ ಬೆಳೆನಷ್ಟ ಆಗಿದೆ. ಈ ನಷ್ಟವನ್ನು ಸೆಸ್ಕ್‌ ಭರಿಸಬೇಕು’ ಎಂದು ಆಗ್ರಹಿಸಿದರು.

‘ಕೃಷಿ ಜಮೀನಿಗೆ ಹಗಲಿನಲ್ಲಿ ನಿರಂತರ ಏಳು ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕು. ಹನೂರು ಭಾಗದಲ್ಲಿ 185 ಲೈನ್‌ಮನ್‌ಗಳಿಗೆ ಬದಲಾಗಿ 65 ಸಿಬ್ಬಂದಿ ಮಾತ್ರ ಇದ್ದು, ನೇಮಕಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರವಿಕುಮಾರ್, ‘ಲೈನ್‌ಮನ್‌ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದು, ಈ ಕಾರಣಕ್ಕೆ ವಿಳಂಬ ಆಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಕೃಷಿ ಜಮೀನುಗಳಿಗೆ ಕಳಪೆ ಗುಣಮಟ್ಟದ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕುತ್ತಿದ್ದು, ಕೆಲವು ದಿನದಲ್ಲೇ ಸುಟ್ಟು ಹೋಗುತ್ತಿವೆ. ಇವುಗಳ ಗುಣಮಟ್ಟದ ಕುರಿತು ತನಿಖೆಗೆ ಸಮಿತಿ ರಚಿಸಬೇಕು’ ಎಂದು ರೈತರೊಬ್ಬರು ಒತ್ತಾಯಿಸಿದರು. ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ₹6 ಸಾವಿರ ಅಭಿವೃದ್ಧಿ ಶುಲ್ಕ ಪಡೆಯುತ್ತಿದ್ದು, ಅದನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ರಾಜೇಂದ್ರ ಎಂಬುವರು ಮಾತನಾಡಿ, ‘ಮಲೆ ಮಹದೇಶ್ವರ ಬೆಟ್ಟದ ಸುತ್ತಲಿನ ಎಲ್ಲ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಸಂಪರ್ಕ ಎನ್ನುವುದು ಕೇವಲ ಪುಸ್ತಕದಲ್ಲಿ ಮಾತ್ರ ಇದೆ’ ಎಂದು ದೂರಿದರು.

‘ಎಲ್ಲ ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗಿತ್ತು. ಆದರೆ ಅರಣ್ಯ ಇಲಾಖೆ ತಕರಾರು ತೆಗೆದಿರುವ ಕಾರಣ ಕೆಲವೊಂದು ಹಾಡಿಗಳಿಗೆ ಸಂಪರ್ಕ ಸಾಧ್ಯವಾಗಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಎಚ್.ವಿ. ಸುಬ್ಬೇಗೌಡ ಮಾತನಾಡಿ, ‘ಒ.ಸಿ. ಇಲ್ಲದೆ ಇರುವ ಸಣ್ಣ ಮನೆಗಳಿಗೂ ಶಾಶ್ವತ ವಿದ್ಯುತ್‌ ಸಂಪರ್ಕ ನೀಡಬೇಕು’ ಎಂದು ಕೋರಿದರು. ‘ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಸಮೀಪದ ಜಾಗೇರಿ ಗ್ರಾಮದಲ್ಲಿ 150-200 ಟಿ.ಸಿ.ಗಳನ್ನು ಆರ್. ಆರ್. ನಂಬರ್ ಇಲ್ಲದೆ ಹಾಕಲಾಗಿದೆ. ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಅವರು ಆರೋಪಿಸಿದರು.

‘1200 ಚ.ಅಡಿಗಿಂತ ಕಡಿಮೆ ಇರುವ ವಾಣಿಜ್ಯ ಕಟ್ಟಡಗಳಿಗೂ ಒ.ಸಿ. ಹೇಳದೇ ವಿದ್ಯುತ್‌ ಸಂಪರ್ಕ ನೀಡಿ’ ಎಂದು ವ್ಯಕ್ತಿಯೊಬ್ಬರು ಕೋರಿದರು.

‘ಸುಮಾರು 4 ಲಕ್ಷ ಮನೆಗಳು ಸಿಸಿ/ ಒಸಿ ಇಲ್ಲದ ಕಾರಣಕ್ಕೆ ತಾತ್ಕಾಲಿಕ ಸಂಪರ್ಕ ಪಡೆದು ದುಬಾರಿ ಶುಲ್ಕ ಪಾವತಿಸುತ್ತಿವೆ. ಇವುಗಳಿಗೆ ಕಾಯಂ ಸೇವೆಗೆ ಆದ್ಯತೆ ನೀಡಿ’ ಎಂದು ನವೀನ್ ರಾಜೇ ಅರಸ್ ಮನವಿ ಮಾಡಿದರು.

ರೈತ ಮುಖಂಡ ಬನ್ನೂರು ನಾರಾಯಣ, ‘ಪ್ರೀಪೇಯ್ಡ್ ವ್ಯವಸ್ಥೆ‌ಯನ್ನು ಮೊದಲು ಸರ್ಕಾರಿ ಕಚೇರಿಗಳಲ್ಲಿ ಜಾರಿಗೊಳಿಸಿ. ನಂತರ ರೈತರ ಮನೆ- ಜಮೀನುಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸಿ’ ಎಂದರು.

ಇಮ್ಮಾವು ನಿವಾಸಿ ಅನಿತಾ ಸದಾನಂದ್, ‘ವಾಣಿಜ್ಯ ಮೀಟರ್ ಅಳವಡಿಕೆಗೆ ಸೆಸ್ಕ್ ಅಧಿಕಾರಿಗಳು 6 ತಿಂಗಳಿಂದ ಅಲೆಸುತ್ತಿದ್ದಾರೆ. ಇನ್ನೆಷ್ಟು ದಿನಗಳು ಬೇಕು?’ ಎಂದು ಪ್ರಶ್ನಿಸಿದರು. ಇಸ್ರೊ ನಿವೃತ್ತ ವಿಜ್ಞಾನಿ ಜಗನ್ನಾಥ್ ಸೋಲಾರ್ ಬಳಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಕುಸುಮ್‌–ಬಿ ಯೋಜನೆಗೆ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ಇನ್ನೂ ಸಂಪರ್ಕ ನೀಡದ ಕುರಿತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಕರ್ನಾಟಕ ರಾಷ್ಟ್ರ ಪಕ್ಷದ ಮುಖಂಡ ನಾಗರಾಜು, ಮೈಸೂರು ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸುರೇಶ್ ಕುಮಾರ್ ಜೈನ್, ಮುಖಂಡ ಅಶ್ವಥ್ ನಾರಾಯಣ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದರು.

ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಕೆಇಆರ್‌ಸಿ ಸದಸ್ಯ ಎಚ್.ಕೆ. ಜಗದೀಶ್, ಸೆಸ್ಕ್‌ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.

‘ದರ ಹೆಚ್ಚಳ; ಸರ್ಕಾರದ ತೀರ್ಮಾನ’

ವಿದ್ಯುತ್ ದರ ಹೆಚ್ಚಳಕ್ಕೆ ಸಂಬಂಧಿಸಿ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ‘ಪ್ರತಿವರ್ಷ ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಮೂರು ವರ್ಷಕ್ಕೊಮ್ಮೆ ವಿದ್ಯುತ್ ದರ ಏರಿಕೆ ಮಾಡಲಾಗುತ್ತಿದೆ. ಆದ್ದರಿಂದ ಇದು ದರ ಏರಿಕೆಗೆ ಸಂಬಂಧಿಸಿದ ಸಭೆಯಲ್ಲ. ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳು 2026-27ನೇ ಸಾಲಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಈ ಬಗ್ಗೆ ಫೆ. 25ರಂದು ಸಭೆ ನಡೆಯಲಿದ್ದು ಸರ್ಕಾರ ದರ ಏರಿಕೆಗೆ ಅನುಮತಿ ಕೊಡಬಹುದು ಅಥವಾ ಕೊಡದೆ ಇರಬಹುದು’ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಮಾಹಿತಿ ನೀಡಿದರು.

ಸಾರ್ವಜನಿಕರ ಒತ್ತಾಯಗಳು ಕುಸುಮ್‌-ಬಿ:

ಶೀಘ್ರ ಸಂಪರ್ಕ ನೀಡಿ ಸಿಸಿ/ ಒಸಿ ಇಲ್ಲದ ಮನೆಗಳಿಗೂ ಸೇವೆ ಒದಗಿಸಿ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡಿ ಹಾಳಾದ ಟ್ರಾನ್ಸ್‌ಫಾರ್ಮರ್ ಟವರ್‌ ಬದಲಿಸಿ ಸೌರಶಕ್ತಿ ಉತ್ಪಾದನೆ ಪ್ರೋತ್ಸಾಹಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.