ADVERTISEMENT

ಚಾಮುಂಡಿ ಬೆಟ್ಟ ಉಳಿಸಿ ಪ್ಲೀಸ್‌...’ಪುಟಾಣಿಗಳ ಉದ್ಘೋಷ: ಹಿರಿಯರೊಂದಿಗೆ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:16 IST
Last Updated 2 ಫೆಬ್ರುವರಿ 2026, 4:16 IST
ಮೈಸೂರಿನ ಚಾಮುಂಡಿಬೆಟ್ಟದ ಸಂರಕ್ಷಣೆಗಾಗಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ನಡಿಗೆಯಲ್ಲಿ ಪ್ಲೆಕಾರ್ಡ್‌ ಹಿಡಿದ ಚಿಣ್ಣರು ಬೆಟ್ಟ ಹತ್ತುವವರಿಗೆ ಜಾಗೃತಿ ಮೂಡಿಸಿದರು – ಪ್ರಜಾವಾಣಿ ಚಿತ್ರ
ಮೈಸೂರಿನ ಚಾಮುಂಡಿಬೆಟ್ಟದ ಸಂರಕ್ಷಣೆಗಾಗಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ನಡಿಗೆಯಲ್ಲಿ ಪ್ಲೆಕಾರ್ಡ್‌ ಹಿಡಿದ ಚಿಣ್ಣರು ಬೆಟ್ಟ ಹತ್ತುವವರಿಗೆ ಜಾಗೃತಿ ಮೂಡಿಸಿದರು – ಪ್ರಜಾವಾಣಿ ಚಿತ್ರ   

ಮೈಸೂರು: ಶಾಲೆಯಲ್ಲಿ ಗಿಡ ನೆಟ್ಟು ಪರಿಸರ ಪ್ರೀತಿ ಮೆರೆದಿದ್ದ ಚಿಣ್ಣರು ರಸ್ತೆಗಿಳಿದರು. ‘ನಮ್ಮ ಚಾಮುಂಡಿ ಬೆಟ್ಟ ಉಳಿಸಿ ಪ್ಲೀಸ್‌’ ಎಂದರು. ಅವರೊಂದಿಗೆ ಭಾಮಿ ವಿ.ಶೆಣೈ, ನಿವೃತ್ತ ಮೇಜರ್ ಜನರನ್‌ ಸುಧೀರ್ ಜಿ.ಒಂಭತ್ಕೆರೆ ಸೇರಿದಂತೆ ಹಿರಿಯರು ಹೆಜ್ಜೆ ಹಾಕಿದರು. ‌

ಬೆಟ್ಟದಲ್ಲಿ ‘ಪ್ರಸಾದ್‌’ ಯೋಜನೆಯಡಿ ನಡೆದಿರುವ ಕಾಮಗಾರಿ ವಿರೋಧಿಸಿ, ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ‘ಚಾಮುಂಡಿ ಬೆಟ್ಟದ ಸಂರಕ್ಷಣೆಗಾಗಿ ನಡಿಗೆ’ಯಲ್ಲಿ ಕಂಡ ದೃಶ್ಯವು ಹಿರಿಯರ ಕಿರು ಬೆರಳನ್ನು ಹಿಡಿದು ಮಕ್ಕಳೇ ಮುನ್ನಡೆಸಿದ ಹೋರಾಟದಂತಿತ್ತು. 

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರೂ ಮಕ್ಕಳ ಜೊತೆಯಾದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಇತಿಹಾಸ ತಜ್ಞರಾದ ಧರ್ಮೇಂದ್ರ ಕುಮಾರ್, ಪ್ರೊ.ಎನ್.ಎಸ್‌.ರಂಗರಾಜು, ಪರಿಸರಕ್ಕಾಗಿ ನಾವು ಬಳಗದ ಪರಶುರಾಮೇಗೌಡ, ಬಿಜೆಪಿ ರಾಜ್ಯ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಆರ್.ರಘುಕೌಟಿಲ್ಯ, ಮೈಸೂರು ಗ್ರಾಹಕರ ಪರಿಷತ್ತು, ಟೀಮ್ ಮೈಸೂರು, ಆರ್‌ಎಲ್‌ಎಚ್‌ಪಿ, ಪಿಯುಸಿಎಲ್, ಕರ್ನಾಟಕ ರಾಷ್ಟ್ರ ಸಮಿತಿ ಮತ್ತು ಬೆಳವಲ ಫೌಂಡೇಷನ್ ಸಂಘಟನೆಗಳ ಸದಸ್ಯರು ಹೆಜ್ಜೆ ಹಾಕಿದರು.

ADVERTISEMENT

ದರ್ಶನಕ್ಕೆ ಅಡ್ಡಿ: ಈ ವೇಳೆ ಮಾತನಾಡಿದ ಪ್ರಮೋದಾದೇವಿ, ‘ಬೆಟ್ಟ ಉಳಿಸಬೇಕಾದ್ದು ನಮ್ಮ ಕರ್ತವ್ಯ. ಕಳೆದ 3 ದಶಕದ ಹಿಂದೆಯೂ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಪರಿಸರದ ಉಳಿವಿಗೆ ಹೋರಾಟ ನಡೆಸಿದ್ದರು. ವೈಯಕ್ತಿಕವಾಗಿಯೇ ಉಳಿದಿತ್ತು. ಇದೀಗ ಹೋರಾಟವನ್ನು ಜನರೂ ಮಾಡುತ್ತಿದ್ದಾರೆ. ಬೆಟ್ಟ ಬೆಟ್ಟವಾಗಿಯೇ ಉಳಿಯಬೇಕು. ಕಾಂಕ್ರೀಟ್‌ ಕಾಡು ಮಾಡುವುದು ಅವಶ್ಯಕತೆ ಇಲ್ಲ. ಭಕ್ತರಿಗೆ ಬೇಕಾದ ಸೌಲಭ್ಯವನ್ನು ಬೆಟ್ಟದ ಕೆಳಗೆಯೇ ಮಾಡಬಹುದಲ್ಲವೇ’ ಎಂದರು. 

‘ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಆಕ್ಷೇಪವಿಲ್ಲ. ಆದರೆ, ಪಾರ್ಕಿಂಗ್‌ ಮಾಡಲಾಗಿದೆ. ರಥೋತ್ಸವ ಸಾಗುವ ಜಾಗವನ್ನೇ ಕಿರಿದು ಮಾಡಲಾಗುತ್ತಿದೆ. ಜನರು ಎಲ್ಲಿಂದ ರಥ ನೋಡುತ್ತಾರೆ? ಚಾಮುಂಡೇಶ್ವರಿ ನೋಡುವುದಕ್ಕೆ ಅವಕಾಶವಿಲ್ಲದೇ ಕಟ್ಟಡ ಕಟ್ಟುವುದರಿಂದ ದೇವರ ದರ್ಶನಕ್ಕೆ ಅಡ್ಡಿ ಮಾಡಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಬಹುಮಹಡಿ ಬೇಕಿರಲಿಲ್ಲ: ‘ಕುಸಿದಿದ್ದ ನಂದಿ ಮಾರ್ಗ ಕಾಮಗಾರಿ ಮುಗಿಯಲು 4 ವರ್ಷ ಬೇಕಾಗಿದೆ. ಬಹುಮಹಡಿ ಪಾರ್ಕಿಂಗ್ ಬೆಟ್ಟಕ್ಕೆ ಅಗತ್ಯವಿರಲಿಲ್ಲ. ಅದರಿಂದ ರಾಜೇಂದ್ರ ವಿಲಾಸ ಅರಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಗುಮ್ಮಟವೂ ತೊಂದರೆಯಲ್ಲಿತ್ತು. ಅದರ ದುರಸ್ತಿ ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು. ಅಗತ್ಯಕ್ಕಿಂತ ಹೆಚ್ಚೇ ಕಟ್ಟಡಗಳು ಬೆಟ್ಟದಲ್ಲಿ ಈಗಾಗಲೇ ಇವೆ. ಅವುಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳಲಿ. ಹೊಸ ಕಟ್ಟಡಗಳನ್ನು ಕಟ್ಟುವುದು ದಯವಿಟ್ಟು ಬೇಡ’ ಎಂದು ಕೋರಿದರು.

ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಮಾತನಾಡಿ, ‘ಬೆಟ್ಟದ ಧಾರಣಾ ಸಾಮರ್ಥ್ಯ ಪರೀಕ್ಷೆ ನಡೆಸದೇ ಕಾಮಗಾರಿ ಕೈಗೊಳ್ಳಲಾಗಿದೆ. ಮಧುಗಿರಿ, ರಾಮನಗರದ ಬೆಟ್ಟಗಳಂತೆ ಗಟ್ಟಿ ಶಿಲೆಯ ಬೆಟ್ಟವಲ್ಲ. ಸಣ್ಣ, ಸಣ್ಣ ಕಲ್ಲು ಗುಡ್ಡೆಗಳಿಂದ ರಚನೆಯದ ಬೆಟ್ಟವಿದು. ಸಡಿಲ ಮಣ್ಣು ಹೊಂದಿದೆ’ ಎಂದು ಹೇಳಿದರು. 

ಆರ್‌ಎಲ್‌ಎಚ್‌ಪಿ ಮತ್ತು ನೈಪುಣ್ಯ ಶಾಲೆಯ ಮಕ್ಕಳೊಂದಿಗೆ ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯ, ದಿನೇಶ್‌ ಚಮ್ಮಾಳಿಗೆ, ಪಿಯುಸಿಎಲ್‌ನ ಕಮಲ್ ಗೋಪಿನಾಥ್, ಗೋಕುಲ್ ಗೋವರ್ಧನ್, ಲೀಲಾ ಶಿವಕುಮಾರ್, ಅರುಣ್‌, ಶೈಲಜೇಶ್, ಪ್ರಭಾ, ಲೀಲಾ ವೆಂಕಟೇಶ್, ಭಾಗ್ಯಾ ಶಂಕರ್, ಗೀತಾ, ಶ್ವೇತಾ, ಅಭಿಷೇಕ್, ಸುರೇಶ್‌ ಸುಬ್ಬರಾವ್, ರವಿ ಪಾಲ್ಗೊಂಡಿದ್ದರು.

‘ಸರ್ಕಾರಕ್ಕೆ ಚಾಮುಂಡಿ ಪ್ರೇರಣೆ ನೀಡಲಿ’ 

‘ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪತಿ ಕಾಂಗ್ರೆಸ್‌ನಲ್ಲಿದ್ದರು ಪುತ್ರ ಬಿಜೆಪಿಯಲ್ಲಿದ್ದಾರೆ. ನಾನು ಯಾವ ಪಕ್ಷದಲ್ಲಿಯೂ ಇಲ್ಲ. ನಾನು ಜನರ ಪರ. ಯಾವ ಪಕ್ಷಕ್ಕೂ ನನ್ನನ್ನು ಸೇರಿಸಬೇಡಿ. ಕಾಮಗಾರಿ ತಡೆಗೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಸರ್ಕಾರಕ್ಕೆ ಚಾಮುಂಡೇಶ್ವರಿ ಪ್ರೇರಣೆ ನೀಡಿ ಯೋಜನೆ ನಿಲ್ಲಿಸಲಿ. ಯಾವುದೇ ಅಭಿವೃದ್ಧಿ ಕೈಗೊಳ್ಳುವ ಮುನ್ನ ನಿಯಮದಂತೆಯೇ ನಮ್ಮೊಂದಿಗೆ ಮಾತನಾಡಿ ಕ್ರಮ ವಹಿಸಲಿ’ ಎಂದು ಪ್ರಮೋದಾದೇವಿ ಹೇಳಿದರು.  ಶಾಸಕ ದರ್ಶನ್ ಪುಟ್ಟಣಯ್ಯ ‘ಬೆಟ್ಟದ ಕೆಳಗೆ ಪಾರ್ಕಿಂಗ್ ಸೌಲಭ್ಯ ನೀಡಲಿ. ಎಲೆಕ್ಟ್ರಿಕ್‌ ವಾಹನ ಸೌಲಭ್ಯ ಕಲ್ಪಿಸಿ. ಚಾಮುಂಡಿ ಬೆಟ್ಟ ವ್ಯಾಪಾರ ಕೇಂದ್ರವಲ್ಲ. ಅಲ್ಲಿ ವಾಣಿಜ್ಯ ಸಂಕೀರ್ಣ ಪ್ಲಾಜಾ ನಿರ್ಮಿಸುವುದೇಕೆ’ ಎಂದು ಪ್ರಶ್ನಿಸಿದರು. 

‘ತಾಯಿ ಕುಸಿದು ಕೆಳಗೆ ಬರುತ್ತಾಳೆ’

ಲೇಖಕಿ ಕುಸುಮಾ ಆಯರಹಳ್ಳಿ ಮಾತನಾಡಿ ‘ಚಾಮುಂಡಿ ಬೆಟ್ಟದ ಮೇಲೆ ಚಾಮುಂಡೇಶ್ವರಿ ಇರಬೇಕು. ಉತ್ತರ ಭಾರತದಿಂದ ಬಂದವರು ಕಷ್ಟಪಟ್ಟು ಬೆಟ್ಟಕ್ಕೇಕೆ ಹತ್ತಿ ಬರಬೇಕು ಅಂತ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಇದೆಲ್ಲ ಮಾಡಿದ ಸುಂದರವಾಗಿ ಕಾಣುತ್ತಿರುವ ಚಾಮುಂಡೇಶ್ವರಿ 10ನೇ ಶತಮಾನದ ಮಹಾಬಲೇಶ್ವರ ಎಲ್ಲರೂ ಕುಸಿದು ಕೆಳಗೆ ಹೋಗಿ ಬಿಡುತ್ತಾಳೆ’ ಎಂದು ವ್ಯಂಗ್ಯವಾಡಿದರು.  ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ಮಾತನಾಡಿ ‘ಬೆಟ್ಟವೆಂಬುದು ರೂಪಕ. ಇಡೀ ಮಹಾರಾಜರ ದೂರದೃಷ್ಟಿಯಾದ ಮೈಸೂರನ್ನು ಮೈಸೂರಾಗಿಯೇ ಉಳಿಸಿಕೊಳ್ಳಬೇಕು. ಚಾಮುಂಡಿ ಬೆಟ್ಟದ ಉಳಿಸಿಕೊಂಡ ಗೆಲುವು ನಗರ ಪ್ರತಿ ಪಾರಂಪರಿಕ ಕಟ್ಟಡ ಉಳಿಸಿದಂತಾಗುತ್ತದೆ. ಮೈಸೂರೆಂದರೆ ಪ್ರತಿ ಮರ ಕೆರೆ ರಸ್ತೆ ಗುಬ್ಬಚ್ಚಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.