ADVERTISEMENT

ದಸರಾ ಜಂಬೂಸವಾರಿಗೆ ಸಕಲ ಸಿದ್ಧತೆ: ಸಚಿವ ಎಸ್.ಟಿ‌.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:29 IST
Last Updated 4 ಅಕ್ಟೋಬರ್ 2022, 6:29 IST
ಜಂಬೂಸವಾರಿಗೆ ಸಕಲ ರೀತಿಯಲ್ಲೂ ಸಿದ್ಧತೆ
ಜಂಬೂಸವಾರಿಗೆ ಸಕಲ ರೀತಿಯಲ್ಲೂ ಸಿದ್ಧತೆ   

ಮೈಸೂರು: ಎರಡು ವರ್ಷ ಸರಳ ದಸರಾ ಆಚರಣೆ ಮಾಡಲಾಗಿದ್ದು, ಈ ಬಾರಿ ಅದ್ದೂರಿಯಾಗಿ ನಡೆಸಲಾಗಿದೆ. ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ‌.ಸೋಮಶೇಖರ್ ಹೇಳಿದರು.

ಮಾವುತರು ಮತ್ತು ಕಾವಾಡಿಗಳು ಮತ್ತವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಮಂಗಳವಾರ ಉಪಾಹಾರ ಬಡಿಸಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಂಬೂಸವಾರಿ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆನೆಗಳಿಗೆ ಒಂದು ತಿಂಗಳಿಂದ ತರಬೇತಿ ನೀಡಲಾಗಿದೆ. ಅ.5ರ ಸಂಜೆ ಜಂಬೂಸವಾರಿ ಸಾಗಲಿದೆ, ಇದರ ಜೊತೆಗೆ 40 ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದು ಹೇಳಿದರು.

ADVERTISEMENT

ಬಂದೋಬಸ್ತ್‌ಗೆ ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.

ಪಾಸ್ ವಿತರಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಷ್ಟು ಸ್ಥಳಾವಕಾಶ ಇದೆಯೋ ಅಷ್ಟು ವ್ಯವಸ್ಥೆ ಮಾಡಲಾಗಿದೆ. ದಸರಾ ಎಂದರೆ ಕೇವಲ ಪಾಸ್ ಅಲ್ಲ. ಒಂದು ವಾರಗಳ ನಡೆದ ಯುವ ದಸರಾ, ಯುವ ಸಂಭ್ರಮ, ರೈತ ದಸರಾ, ಕುಸ್ತಿ ಇದ್ಯಾವುದಕ್ಕೂ ಪಾಸ್ ಇರಲಿಲ್ಲ. ಅದೆಲ್ಲವನ್ನೂ ವೀಕ್ಷಿಸಿ ಜನರು ಖುಷಿಪಟ್ಟಿದ್ದಾರೆ. ಜಂಬೂಸವಾರಿಗೆ
15-20 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ದಸರಾ ಉಪಸಮಿತಿಗಳು ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದವು. ಅಪ್ಪು ನಮನ, ಯುವ ದಸರಾ, ರೈತ ದಸರಾ, ಕವಿಗೋಷ್ಠಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಮಹಾರಾಣಿ ಅವರು ಕೂಡ ಎಲ್ಲಾ ರೀತಿಯ ಸಹಕಾರ ನೀಡಿದರು. ಅಧಿಕಾರಿಗಳು, ಮೈಸೂರು ಜನತೆಯ ಸಂಪೂರ್ಣ ಸಹಕಾರದಿಂದ ಎಲ್ಲವೂ ಸುಸೂತ್ರವಾಗಿ ಸಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.