ಮೈಸೂರು: ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೋಮವಾರವೂ ಡ್ರೋನ್ ಪ್ರದರ್ಶನವು ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು.
3 ಸಾವಿರ ಡ್ರೋನ್ ಗಳು ಆಗಸದಲ್ಲಿ ಬಣ್ಣಬಣ್ಣದ ಕಲಾಕೃತಿಗಳ ಚಿತ್ತಾರಗಳನ್ನು ಬಿಡಿಸುವ ಮೂಲಕ ಎಲ್ಲರನ್ನು ರೋಮಾಂಚನಗೊಳಿಸಿದವು. ಸೌರಮಂಡಲ, ಹುಲಿ, ದಸರಾ ಆನೆ, ಅಂಬಾರಿ, ಸರ್ಕಾರದ ಗ್ಯಾರಂಟಿ ಯೋಜನೆಗಳು... ಹೀಗೆ ವಿವಿಧ ಕಲಾಕೃತಿಗಳನ್ನು ಡ್ರೋನ್ಗಳು ನೀಲಿಯಾಗಸದಲ್ಲಿ ಮೂಡಿಸಿದವು.
ಸಂಗೀತ ಸಂಜೆ:
ವಿವಿಧ ಕಲಾವಿದರು ನಡೆಸಿಕೊಟ್ಟ ಗಾಯನವು ಪ್ರೇಕ್ಷಕರನ್ನು ರಂಜಿಸಿತು.
‘ಐಗಿರಿ ನಂದಿನಿ’ ಗೀತೆಯೊಂದಿಗೆ ಸಂಗೀತ ಸಂಜೆಗೆ ಗಾಯಕಿ ದಿವ್ಯಾ ರಾಮಚಂದ್ರ ಅದ್ಭುತ ಆರಂಭ ನೀಡಿದರು. ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ, ಪಸಂದಾಗವ್ನೆ’ ಮೊದಲಾದ ಹಾಡುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಮೈಸೂರಿನ ಶ್ರೀಹರ್ಷ ಹಾಡಿದ ‘ಬೊಂಬೆ ಹೇಳುತೈತೆ’ ಗೀತೆಗೆ ಮೈದಾನದಲ್ಲಿ ಸೇರಿದ್ದ ಜನರೆಲ್ಲ ದನಿಗೂಡಿಸಿದರು.
‘ಅಪ್ಪ ಐ ಲವ್ ಯೂ’ ಹಾಡಿನೊಂದಿಗೆ ವೇದಿಕೆಗೆ ಬಂದ ಅನುರಾಧ ಭಟ್, ‘ಕಣ್ಣು ಹೊಡಿಯಾಕ್ಕ’ ಹಾಡಿ ಮನರಂಜಿಸಿದರು. ಇವರಿಗೆ ದನಿಯಾದ ಗಾಯಕ ಜಸ್ಕರಣ್ ಸಿಂಗ್, ‘ದ್ವಾಪರ ದಾಟುತ’ ಹಾಡಿನ ಮೂಲಕ ರಂಜಿಸಿದರು.
ಡ್ರೋನ್ ಪ್ರದರ್ಶನಕ್ಕೆ ಸಚಿವ ಕೆ. ವೆಂಕಟೇಶ್, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.