ಮೈಸೂರು: ದಸರಾದ ಪ್ರಮುಖ ಆಕರ್ಷಣೆಯಾದ ಫಲ ಪುಷ್ಪ ಪ್ರದರ್ಶನವು ‘ಗಾಂಧೀಜಿ ಮತ್ತು ಅವರ ತತ್ವ’ಗಳ ಕುರಿತು ಬೆಳಕು ಚೆಲ್ಲಲಿದೆ. ಹೀಗಾಗಿ ಈ ಬಾರಿ ಹೂಗಳ ರಾಶಿಯಲ್ಲಿ ‘ಗಾಂಧಿ’ಯನ್ನು ಕಾಣಬಹುದು.
ತೋಟಗಾರಿಕಾ ಇಲಾಖೆ ಹಾಗೂ ಸಂಘವು ‘ದಸರಾ ಫಲಪುಷ್ಪ ಪ್ರದರ್ಶನ’ದ ವಿಷಯವನ್ನು ಆಯ್ಕೆ ಮಾಡಿದ್ದು, ಕಮಿಷನರ್ ಕಚೇರಿ ಮುಂಭಾಗದ ಕುಪ್ಪಣ್ಣ ಉದ್ಯಾನದಲ್ಲಿರುವ ಗಾಜಿನ ಮನೆಯಲ್ಲಿ ಈ ವರ್ಷ ಗಾಂಧೀಜಿ ತತ್ವ ಸಾರುವ ಕಲಾಕೃತಿ ಮೂಡಿಬರಲಿದೆ.
ಉದ್ಯಾನದ ತುಂಬಾ ಫಲ, ಪುಷ್ಪಗಳಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸಿದರೆ, ಗಾಜಿನ ಮನೆಯಲ್ಲಿ ಪ್ರತೀ ವರ್ಷ ಹೊಸ, ಹೊಸ ವಿಚಾರದಲ್ಲಿ ನೂರಾರು ಪುಷ್ಪಗಳನ್ನು ಬಳಸಿ ಕಲಾಕೃತಿ ನಿರ್ಮಿಸಲಾಗುತ್ತದೆ. 2023ರಲ್ಲಿ ಚಂದಿರನ ದಕ್ಷಿಣ ಧ್ರುವಕ್ಕೆ ಮೊದಲು ಕಾಲಿಟ್ಟ ವಿಕ್ರಮ್ ಲ್ಯಾಂಡರ್ ಹಾಗೂ ಚಂದ್ರಯಾನ–3ರ ಕಲಾಕೃತಿ ಹಾಗೂ 2024ರಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಬೆಳೆದು ಬಂದ ಹಾದಿಯು ಹೂಗಳ ಲೋಕದಲ್ಲಿ ಅರಳಿತ್ತು.
ಈ ಬಾರಿಯ ಕಲಾಕೃತಿಗಳ ನಿರ್ಮಾಣಕ್ಕಾಗಿ, ಕಳೆದ ಎರಡು ತಿಂಗಳಲ್ಲಿ ಕುಪ್ಪಣ್ಣ ಉದ್ಯಾನ ಹಾಗೂ ಅರಮನೆ ಆವರಣದಲ್ಲಿ 65 ಸಾವಿರ ಸಸಿಗಳನ್ನು ಬೆಳೆಸಲಾಗುತ್ತಿದೆ. ಇಲಾಖೆಯು ಇದಕ್ಕಾಗಿ 150ಕ್ಕೂ ಹೆಚ್ಚು ಜನರನ್ನು ನೇಮಿಸಿದೆ.
ಹೂವಿನ ಸಸಿಗಳನ್ನು ಬೆಳೆಸಿ ಪೋಷಿಸುವ ಕಾರ್ಯ ನಡೆದಿದೆ. ಎಲ್ಲರನ್ನೂ ಆಕರ್ಷಿಸುವ ಕಲಾಕೃತಿಗಳ ನಿರ್ಮಾಣಕ್ಕಾಗಿ ಸಿದ್ಧತೆ ನಡೆಸಿದ್ದು ಸಭೆ ನಡೆಯುತ್ತಿದೆಮಂಜುನಾಥ ಅಂಗಡಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.