ADVERTISEMENT

ಮೈಸೂರು ಅತ್ಯಾಚಾರ ಪ್ರಕರಣ: ಪೊಲೀಸರನ್ನೇ ಇರಿಯಲು ಮುನ್ನುಗ್ಗಿದ್ದ ಆರೋಪಿ!

ಆರೋಪಿ ಬಗಲಲ್ಲಿ ಸದಾ ಚಾಕು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 7:14 IST
Last Updated 1 ಸೆಪ್ಟೆಂಬರ್ 2021, 7:14 IST
ಸ್ಥಳ ಮಹಜರು ಕಾರ್ಯದಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳವನ್ನು ತೋರಿಸಿದ ಆರೋಪಿ – ಪ್ರಜಾವಾಣಿ ಸಂಗ್ರಹ ಚಿತ್ರ
ಸ್ಥಳ ಮಹಜರು ಕಾರ್ಯದಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳವನ್ನು ತೋರಿಸಿದ ಆರೋಪಿ – ಪ್ರಜಾವಾಣಿ ಸಂಗ್ರಹ ಚಿತ್ರ   

ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಯು ಚಾಕುವಿನಿಂದ ಪೊಲೀಸರನ್ನೇ ಇರಿಯಲು ಮುನ್ನುಗ್ಗಿದ್ದ!

ತಮಿಳುನಾಡಿನ ತಿರ್‌ಪೂರ್‌ ಜಿಲ್ಲೆಯ ಮನೆಯಲ್ಲಿದ್ದ ಆತನನ್ನು ಬಂಧಿಸಲು ತೆರಳಿದ್ದ ಪೊಲೀಸರು ಸ್ವಲ್ಪ ಯಾಮಾರಿದ್ದರೂ ಮಾರಣಾಂತಿಕ ಹಲ್ಲೆಗೆ ಗುರಿಯಾಗುತ್ತಿದ್ದ ಅಪಾಯಕಾರಿ ಸನ್ನಿವೇಶವೂ ನಿರ್ಮಾಣವಾಗಿತ್ತು.

‘ಖಚಿತ ಮಾಹಿತಿ ಮೇರೆಗೆ ಆ.28ರಂದು ರಾತ್ರಿ 1 ಗಂಟೆಯಲ್ಲಿ ಕೇವೂರು ಗ್ರಾಮದ ತೋಟವೊಂದರಲ್ಲಿ ‌ಆರೋಪಿಯ ಮನೆ ಸೇರಿದಂತೆ ಅಲ್ಲಿದ್ದ 10ರಿಂದ 12 ಮನೆಗಳ ಶೋಧ ಕಾರ್ಯ ನಡೆದಿತ್ತು. ಆ ವೇಳೆಯಲ್ಲೇ ಆರೋಪಿ ಕುಟುಂಬದವರ ಜತೆ ಇರದೆ ಪ್ರತ್ಯೇಕವಾದ ಚಿಕ್ಕ ಮನೆಯೊಂದರಲ್ಲಿ ಮಲಗಿದ್ದ. ಹಲವು ಸಲ ಬಾಗಿಲು ಬಡಿದ ಮೇಲೆ ಎಚ್ಚರಗೊಂಡ ಆತ ಚಾಕು ಹಿಡಿದುಕೊಂಡೇ ಬಾಗಿಲು ತೆರೆದು ಇರಿಯಲು ಮುನ್ನುಗ್ಗಿದ’ ಎಂದು ತನಿಖಾ ತಂಡದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು.

‘ಎರಡು ಬಾರಿ ಆತ ನಮ್ಮ ಮೇಲೆ ಎರಗಲು ಪ್ರಯತ್ನಿಸಿದ. ಅದನ್ನು ನಿರೀಕ್ಷಿಸಿದ್ದ ನಾವು ಕೂಡಲೇ ಪಕ್ಕಕ್ಕೆ ಸರಿದು ಅವನನ್ನು ಹಿಡಿದೆವು. ಆತ ಸದಾ ಕಾಲ ಚಾಕುವನ್ನು ತನ್ನ ಮಗ್ಗಲಿರಿಸಿಕೊಂಡೇ ಮಲಗುತ್ತಿದ್ದ ಎಂಬ ಸಂಗತಿಯೂ ವಿಚಾರಣೆಯಲ್ಲಿ ಗೊತ್ತಾಯಿತು’ ಎಂದರು. ಎಸಿಪಿ ಶಿವಶಂಕರ್, ಇನ್‌ಸ್ಪೆಕ್ಟರ್‌ಗಳಾದ ಮಹದೇವಸ್ವಾಮಿ, ಶ್ರೀಕಾಂತ್ ಹಾಗೂ ಪ್ರಕಾಶ್ ನೇತೃತ್ವದ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿದ್ದವು.

ಮತ್ತೊಬ್ಬ ಆರೋಪಿ ಬಂಧನ?:ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು ಖಚಿತಪಡಿಸಿಲ್ಲ. ಇದುವರೆಗೆ ಐವರನ್ನು ಬಂಧಿಸಲಾಗಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೆ. 1ರಂದು ನಗರಕ್ಕೆ ಭೇಟಿ ನೀಡಲಿದ್ದು, ಪ್ರಕರಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.