
ಮೈಸೂರು: ಪೌರಕಾರ್ಮಿಕರಿಗೆ ಅವರು ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಮೇರೆಗೆ ಇಲ್ಲಿನ ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್ ಆಸೀಫ್ ಅಮಾನತುಗೊಳಿಸಿದ್ದಾರೆ.
ಆರೋಗ್ಯ ವಿಭಾಗದ ಪ್ರಥಮದರ್ಜೆ ಸಹಾಯಕಿಯರಾದ ಕೆ.ಎಲ್.ಸಿ. ಪಾಪ, ಎಂ. ಪುಷ್ಪಾವತಿ ಹಾಗೂ ದ್ವಿತೀಯದರ್ಜೆ ಸಹಾಯಕಿ ಎಚ್.ಸಿ. ಅನಿತಾ ಅಮಾನತುಗೊಂಡವರು.
ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಕೆಲವು ಪೌರಕಾರ್ಮಿಕರು ಕೆಲಸಕ್ಕೆ ಗೈರುಹಾಜರಾಗಿದ್ದರು. ನಿಯಮದ ಪ್ರಕಾರ ಗೈರುಹಾಜರಿಗೆ ವೇತನ ಕಡಿತಗೊಳಿಸಿ ಪಾವತಿಸಬೇಕಾಗಿತ್ತು. ಆದರೆ, ಅವರಿಗೆ ಪೂರ್ಣ ಪ್ರಮಾಣದ ವೇತನ ನೀಡಿರುವುದು, ಕರ್ತವ್ಯ ಲೋಪ ಎಸಗಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಕಾರಣದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕೆ.ಎಲ್.ಸಿ. ಪಾಪ ಸೆಪ್ಟೆಂಬರ್ನಲ್ಲಿ ₹4,25,273, ಅಕ್ಟೋಬರ್ನಲ್ಲಿ ₹ 4,07,793 ಹಾಗೂ ನವೆಂಬರ್ನಲ್ಲಿ ₹ 5,25,455 ಹೆಚ್ಚುವರಿಯಾಗಿ ಪಾವತಿದ್ದಾರೆ. ಅಂತೆಯೇ ಪುಷ್ಪಾವತಿ ಸೆಪ್ಟೆಂಬರ್ನಲ್ಲಿ ₹ 10,883, ಅಕ್ಟೋಬರ್ನಲ್ಲಿ ₹ 42,916, ನವೆಂಬರ್ನಲ್ಲಿ ₹ 63,282, ಅನಿತಾ ಸೆಪ್ಟೆಂಬರ್ನಲ್ಲಿ ₹ 83,566, ಅಕ್ಟೋಬರ್ನಲ್ಲಿ ₹ 36,370 ಹಾಗೂ ನವೆಂಬರ್ನಲ್ಲಿ ₹ 34,769 ಪಾವತಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.