ಹುಣಸೂರು: ಹುಣಸೂರಿನಿಂದ ನಾಗರಹೊಳೆ ಅಭಯಾರಣ್ಯ ಮಾರ್ಗವಾಗಿ ಕೊಡಗು ಜಿಲ್ಲೆಯ ಕುಟ್ಟ ಸಂಪರ್ಕಿಸುವ ಮುಕ್ತ ರಸ್ತೆ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಅನುದಾನದ ಸಮೇತ ದಶಕಗಳ ಬಳಿಕ ಕಾಮಗಾರಿಗೆ ಚಾಲನೆ ನೀಡುತ್ತಿರುವೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
ನಾಗರಹೊಳೆ ಅಭಯಾರಣ್ಯದೊಳಗೆ ಹಾದು ಹೋಗುವ ಹುಣಸೂರು ವಿಭಾಗಕ್ಕೆ ಸೇರಿದ 7.8 ಕಿ.ಮಿ. ದೂರದ ರಸ್ತೆ ಇದಾಗಿದ್ದು, ರಸ್ತೆ ಹಾಳಾಗಿರುವ ದಶಕಗಳಿಂದ ಪ್ರವಾಸಿಗರು ಬಗ್ಗೆ ದೂರುತ್ತಿದ್ದು, ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಅಂತಿಮವಾಗಿ ₹10 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ವೀರನಹೊಸಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆ 2.3 ಕಿ.ಮಿ. ಅಭಿವೃದ್ಧಿಗೊಳಿಸಿ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಿ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಲಾಗಿದೆ ಎಂದರು.
ಹುಣಸೂರು ಪಿಡಬ್ಲ್ಯುಡಿ ಎಂಜಿನಿಯರ್ ಯತೀಶ್ ಯು.ಆರ್. ಹಾಗೂ ಎಇ ಪ್ರಭಾಕರ್ ಮಾತನಾಡಿ, ‘ನಾಗರಹೊಳೆ ಉದ್ಯಾನದೊಳಗೆ ಸಂಪೂರ್ಣ ಹಾಳಾಗಿರುವ 7 ಕಿ.ಮಿ.ವರೆಗಿನ ರಸ್ತೆಯನ್ನು ತೆಗೆದು 3.7 ಮೀಟರ್ ಅಗಲದ ರಸ್ತೆ ನಿರ್ಮಿಸಲಾಗುವುದು. ಅರಣ್ಯದೊಳಗೆ ಹೆಚ್ಚಾಗಿ ಮಳೆ ಬೀಳುವುದರಿಂದ ವೆಟ್ ಮಿಕ್ಸ್ನೊಂದಿಗೆ ಡಾಂಬರೀಕರಣಗೊಳಿಸಲಾಗುವುದು. ನಾಗಾಪುರ ಪುನರ್ವಸತಿ ಕೇಂದ್ರದಿಂದ ವೀರನಹೊಸಹಳ್ಳಿ ಗೇಟ್ವರಗೆ 2.3 ಕಿ.ಮಿ.ರಸ್ತೆ 5.5 ಮೀಟರ್ ವಿಸ್ತರಸಿ ಅಭಿವೃದ್ಧಿಗೊಳಿಸಲಾಗುವುದು’ ಎಂದರು.
ಮೆಷ್ ಅಳವಡಿಸಿ: ‘ಜಿಂಕೆ ಹಾವಳಿಯಿಂದ ಅರಣ್ಯದಂಚಿನ ಕೃಷಿಕರ ಫಸಲು ನಷ್ಟವಾಗುತ್ತಿದ್ದು, ರೈಲ್ವೆ ತಡೆಗೋಡೆಗೆ ಕಬ್ಬಿಣದ ಮೆಷ್ ಅಳವಡಿಸಬೇಕು. ಇದರಿಂದ ರೈತರ ಫಸಲು ಅಸಂರಕ್ಷಿಸಿದಂತ್ತಾಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್ ಶಾಸಕರ ಗಮನ ಸೆಳೆದರು.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಪ್ರಸ್ತಾಪಿಸಲಾಗುವುದು’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಮುಖಂಡ ಕಟ್ಟನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಗಣೇಶ್, ಕುಮಾರ್, ರವಿಂದ್ರ, ವೆಂಕಟೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.