ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನ ಗುಂಡತ್ತೂರು ಗ್ರಾಮದಜಿ.ಎಂ.ರಾಜಶೇಖರ್ ಮತ್ತು ಜಿ.ಎಂ.ರಕ್ಷಿತಾ ಗೌಡ ಗೋವಾದ ಮಾಪುಸಾ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, 2022ರ ಮಾರ್ಚ್ನಲ್ಲಿ ಬ್ಯಾಂಕಾಕ್ನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿರುವ ಮಾದೇಗೌಡ ಮತ್ತು ಎಚ್.ಜೆ.ಭಾಗ್ಯಾ ದಂಪತಿ ಪುತ್ರ– ಪುತ್ರಿ.
ಚಾಮರಾಜನಗರ ಜಿಲ್ಲೆಯ ಡಿಫೆನ್ಸ್ ಮೆಡಲ್ ಶಾಲೆಯ ಬಿ.ರಾಜೇಶ್ ಬಳಿ 15 ವರ್ಷಗಳಿಂದ ಕರಾಟೆ ಕಲಿಯುತ್ತಿದ್ದು, ಮೂರು ವರ್ಷಗಳಿಂದ ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದಾರೆ.
ಜಿ.ಎಂ. ರಾಜಶೇಖರ್ ಏರೋನಾಟಿಕಲ್ ಎಂಜಿನಿಯರ್ ಪದವಿ ಪಡೆದಿದ್ದು, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ನಿಂದಾಗಿ ಊರಿಗೆ ಬಂದಿದ್ದಾರೆ. ಜಿ.ಎಂ.ರಕ್ಷಿತಾ ಗೌಡ ಡೆಹರಾಡೂನ್ನ ಫಾರೆಸ್ಟ್ರಿ ಕಾಲೇಜಿನಲ್ಲಿ ಓದುತ್ತಿದ್ದಾರೆ.
‘ಗೋವಾದಲ್ಲಿ ನಡೆದ ಸ್ಪರ್ಧೆಗಳಲ್ಲಿ ದೇಶದ 23 ರಾಜ್ಯಗಳಿಂದ 2,600 ಮಂದಿ ಭಾಗವಹಿಸಿದ್ದರು. ರಾಜ್ಯದಿಂದ 108 ಮಂದಿ ಸ್ಪರ್ಧಿಸಿದ್ದರು. ಅದರಲ್ಲಿ 17 ಸ್ಪರ್ಧಿಗಳು 2022ರಲ್ಲಿ ಏಷ್ಯಾದಲ್ಲಿ ನಡೆಯುವ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ’ ಎಂದು ಬಿ.ರಾಜೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.