ನಂಜನಗೂಡು: ನಿಜಗುಣ ಶಿವಯೋಗಿಗಗಳು ಸಂತ ಶ್ರೇಷ್ಠರು, ಮನುಷ್ಯ ಅಹಂಕಾರವನ್ನು ತೊರೆದು ಮೋಕ್ಷ ಸಂಪಾದಿಸಬೇಕು. ಲೌಕಿಕ ಮತ್ತು ಅಲೌಕಿಕ ಮಾರ್ಗವನ್ನು ಸಮನಾಗಿ ಕಾಣುವುದೇ ಸಮಸ್ಥಿತಿ ಎಂದು ನಿಜಗುಣರು ಸಾರಿದ್ದಾರೆ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಭಾನುವಾರ ನಿಜಗುಣ ಶಿವಯೋಗಿಗಳ ‘ಅನುಭವಸಾರ’ ಕೃತಿಯ ಬಗೆಗೆ ಏರ್ಪಡಿಸಿದ್ದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಗವಂತನಲ್ಲಿ ಲೀನವಾಗಲು ಮೋಕ್ಷ ಮಾರ್ಗವನ್ನು ಬೋಧಿಸುವ ಉತ್ತಮ ಗ್ರಂಥ ‘ಅನುಭವಸಾರ’ವಾಗಿದೆ. ಮನುಷ್ಯ ಎಲ್ಲಿಂದ ಬಂದಿರುವನೋ ಅಲ್ಲಿಗೆ ಹೋಗಬೇಕು. ಮಳೆಯ ನೀರು ಭೂಮಿಯ ಮೇಲೆ ಬೀಳುತ್ತದೆ. ನೀರಿನ ಗುರಿ ಮಾತ್ರ ಸಮುದ್ರ ಸೇರುವುದೇ ಆಗಿರುತ್ತದೆ. ಅಧ್ಯಯನ ಶಿಬಿರದಲ್ಲಿ ಕೇಳಿದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಚಿತ್ತದಿಂದ ಬದುಕಬೇಕು ಎಂದು ಹೇಳಿದರು.
ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅನುಭವಿಗಳ ಸಂಗದಿಂದ ಮನಸ್ಸು ಶುದ್ಧಿಯಾಗುತ್ತದೆ. ಭಾರತದ ಸನಾತನ ಧರ್ಮ ಶ್ರೇಷ್ಠವಾದುದು. ಸಾಧು, ಸಂತರ ಪಾದ ಸ್ಪರ್ಶದಿಂದ ನಮ್ಮ ನೆಲ ಪಾವನವಾಗಿದೆ. ವಿದೇಶಿಯರು ನಮ್ಮ ದೇಶದಿಂದ ಸಂಪತ್ತನ್ನು ಲೂಟಿ ಮಾಡಿದರೂ ಆಧ್ಯಾತ್ಮಿಕ ಅಸ್ತಿತ್ವವನ್ನು ನಾಶಗೊಳಿಸಲು ಸಾಧ್ಯವಾಗಲಿಲ್ಲ. ದೇಶದ ಯುವಜನತೆ ಆಧ್ಯಾತ್ಮಿಕ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನಿಜಗುಣರು ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು. ವಿಜ್ಞಾನ ಮತ್ತು ಹಸಿರು ಕ್ರಾಂತಿಗಳು ಆಗಿವೆ. ಈಗ ಆಧ್ಯಾತ್ಮಿಕ ಕ್ರಾಂತಿಯಾಗಬೇಕಿದೆ. ನಂಬಿಕೆಯೇ ದೇವರು, ಪರೋಪಕಾರದಿಂದ ಪುಣ್ಯ ಲಭಿಸುತ್ತದೆ. ಪುಣ್ಯ ಸಂಪಾದನೆಯಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ. ಭಕ್ತಿ ಪಂಥಗಳು ಜನಸಾಮಾನ್ಯರಲ್ಲಿ ಆಧ್ಯಾತ್ಮಿಕತೆಯನ್ನು ಜಾಗೃತಗೊಳಿಸಿವೆ. ಇದರಿಂದ ನಮ್ಮ ಸಂಸ್ಕೃತಿ ಉಳಿದಿದೆ ಎಂದು ತಿಳಿಸಿದರು.
ವಿದ್ವಾನ್ ಜಗದೀಶ್ ಶರ್ಮಾ ಸಂಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಶಂಕರ್ ದೇವನೂರು, ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಅಜಯಾನಂದ ಸ್ವಾಮೀಜಿ, ಮಾತೋಶ್ರೀ ಕಾವ್ಯ, ಮಾತೋಶ್ರೀ ಸರಸ್ವತಿ, ಸೋಮಶೇಖರ್ ಬಿ. ಮಗದುಮ್ಮ, ಕಾಶಿನಾಥ್, ಅರುಣಾ ಶಿರಗುಪ್ಪಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.