ಸಿದ್ದರಾಮಯ್ಯ
ಮೈಸೂರು: ‘ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಕುರಿತು ಸಮಿತಿ ವರದಿ ಬಳಿಕ ಸೂಕ್ತ ನಿರ್ಣಯ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶನಿವಾರ ನಡೆದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ‘ಈಗಾಗಲೇ 5 ರಾಜ್ಯಗಳು ಒಪಿಎಸ್ಗೆ ಮರಳಿವೆ. ನಮ್ಮದೂ ಸೇರಿದರೆ 6 ರಾಜ್ಯಗಳಾಗುತ್ತದೆ ಅಷ್ಟೇ’ ಎಂದರು.
ಇದಕ್ಕೆ ಸಭಿಕರು ‘6ನೇ ರಾಜ್ಯ ಮತ್ತು 6ನೇ ಗ್ಯಾರಂಟಿ ನೀಡಿ’ ಎಂದು ಒತ್ತಾಯಿಸಿದರು.
‘ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ಜಾರಿಗೆ ತಂದಿದ್ದು ಕೇಂದ್ರ ಸರ್ಕಾರ. ಆದರೆ, ನಮ್ಮನ್ನು ಹಿಡಿದುಕೊಂಡಿದ್ದೀರಾ. ಅದೇನೆ ಇರಲಿ, ವರದಿ ಬಂದ ಬಳಿಕ ನಿಮ್ಮೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಶಾಲಾ ಶಿಕ್ಷಕರ ನೇಮಕಾತಿಯಲ್ಲಿನ ಸಿ ಅಂಡ್ ಆರ್ ನಿಯಮಗಳ ಬಗ್ಗೆಯೂ ಚರ್ಚಿಸಲಾಗುವುದು. ಆರೋಗ್ಯ ಸಂಜೀವಿನಿ ಬಗ್ಗೆಯೂ ಸೂಕ್ತ ತೀರ್ಮಾನ ಮಾಡಲಾಗಿದೆ’ ಎಂದರು.
‘ನಿಮ್ಮೆಲ್ಲ ಸಮಸ್ಯೆಗಳನ್ನು ಸರ್ಕಾರ ತೆರೆದ ಮನಸ್ಸಿನಿಂದ ಬಗೆಹರಿಸಲಿದೆ. ನೀವೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಡವರು, ದಲಿತರು, ಶೋಷಿತರ ಪರ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.