ಎಚ್.ಡಿ.ಕೋಟೆ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವ್ಯಾಪ್ತಿಯಲ್ಲಿ ಸಫಾರಿ ನಡೆಸಲು ಆನ್ಲೈನ್ನಲ್ಲಿ ಕಾಯ್ದಿರಿಸುವ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಸದ್ಯ, ಒಂದು ಬಸ್ಗೆ 25 ಟಿಕೆಟ್ ಕಾಯ್ದಿರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ದಮ್ಮನಕಟ್ಟೆ ಸಫಾರಿ ಕೇಂದ್ರವನ್ನು ಕಾಕನಕೋಟೆ ಸಫಾರಿ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ. ಆನ್ಲೈನ್ನಲ್ಲಿ ಕಾಯ್ದಿರಿಸುವುದರಿಂದ ಟಿಕೆಟ್ ಕೌಂಟರ್ನಲ್ಲಿ ಸಾಲುಗಟ್ಟಿ ನಿಲ್ಲುವ ಕಿರಿಕಿರಿ ತಪ್ಪಲಿದೆ.
ಸೋಮವಾರದಿಂದ ಶುಕ್ರವಾರದವರಗೆ ಬೆಳಿಗ್ಗೆ 6ರಿಂದ 9 ಗಂಟೆಯವರಗೆ, ಸಂಜೆ 3.30ರಿಂದ 6ಗಂಟೆಯವರಗೆ ಸಫಾರಿ ಇರಲಿದೆ. ಒಂದು ಸಫಾರಿಗೆ ₹ 500 ಕ್ಯಾಮೆರಾಗೆ ₹ 500, 5 ವರ್ಷ ಮೇಲ್ಪಟ್ಟ 12 ವರ್ಷದೊಳಗೆ ಮಕ್ಕಳಿಗೆ ₹ 250, ವಿದೇಶಿಗರಿಗೆ ₹ 1,750 ಟಿಕೆಟ್ ದರ ಇದೆ.
ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಬೆಳಿಗ್ಗೆ 6ರಿಂದ 7.30, 7.45ರಿಂದ 9, ಸಂಜೆ 3ರಿಂದ 4.30, 4.30ರಿಂದ ಸಂಜೆ 6 ಗಂಟೆಯವರೆಗೆ ಸಫಾರಿ ಇರಲಿದೆ. ಒಂದು ಸಫಾರಿಗೆ ₹ 350, 5 ವರ್ಷ ಮೇಲ್ಪಟ್ಟ 12 ವರ್ಷದೊಳಗಿನ ಮಕ್ಕಳಿಗೆ ₹ 175, ವಿದೇಶಿಗರಿಗೆ ₹ 1,600 ಇರಲಿದೆ. ಕ್ಯಾಮೆರಾಗೆ ₹ 500 ಶುಲ್ಕ ಇದೆ.
ವನ್ಯಜೀವಿಗಳನ್ನು ವೀಕ್ಷಿಸಲು ದೇಶ, ವಿದೇಶದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಹುಲಿ ಮತ್ತು ಕಪ್ಪು ಚಿರತೆ ಚಿತ್ರಗಳನ್ನು ತೆಗೆಯಲು ವಾರಗಟ್ಟಲೆ ರೆಸಾರ್ಟ್ಗಳಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲಿನ ಸಫಾರಿಯ ಜನರಿಗೆ ಆನೆಗಳು, ನವಿಲು, ಚಿರತೆ, ಹುಲಿ, ಕಾಡೆಮ್ಮೆ, ಕೆನ್ನಾಯಿ, ಕರಡಿಗಳು, ಜಿಂಕೆಗಳು, ಕಡವೆಗಳು ಸೇರಿದಂತೆ ವಿಶೇಷವಾದ ಪಕ್ಷಿಗಳೂ ನೋಡಲು ಸಿಗುತ್ತವೆ. ದಮ್ಮನಕಟ್ಟೆ ಸಫಾರಿಯೆಂದರೆ ಪ್ರವಾಸಿಗರಿಗೆ ಹೆಚ್ಚು ಪ್ರಿಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.