ADVERTISEMENT

ಜೆಡಿಎಸ್‌ನ ‘ಪಂಚರತ್ನ’ ಯಾತ್ರೆ ಮಾರ್ಚ್‌ 26ರಂದು ಮೈಸೂರಿನಲ್ಲಿ ಸಮಾರೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 11:45 IST
Last Updated 3 ಮಾರ್ಚ್ 2023, 11:45 IST
ಪಂಚರತ್ನ ಯಾತ್ರೆಯ ಒಂದು ನೋಟ
ಪಂಚರತ್ನ ಯಾತ್ರೆಯ ಒಂದು ನೋಟ    

ಮೈಸೂರು: ‘ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಚಾಮುಂಡೇಶ್ವರಿ ಸನ್ನಿಧಿಯ ಮೈಸೂರಿನಲ್ಲಿ ಮಾರ್ಚ್‌ 26ರಂದು ನಡೆಯಲಿದ್ದು, 10 ಲಕ್ಷ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಗರಿಕರು ಸೇರಲಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ನ.18ರಿಂದ ಆರಂಭವಾದ ಪಂಚರತ್ನ ಯಾತ್ರೆಗೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬಿಜೆಪಿ, ಕಾಂಗ್ರೆಸ್‌ನವರಂತೆ ಜನರಿಗೆ ಆಮಿಷ ನೀಡಿ ಸಮಾವೇಶ ಮಾಡಿಲ್ಲ. ಜನರ ಕಡೆಗೆ ಯಾತ್ರೆ ನಡೆದಿತ್ತು’ ಎಂದರು.

‘ಚುನಾವಣೆ ಬಂದಾಗ ಬಿಜೆಪಿಗೆ ಹಿಂದುತ್ವ ನೆನಪಾಗುತ್ತದೆ. ಉರಿಗೌಡ, ನಂಜೇಗೌಡರ ಸುಳ್ಳು ಇತಿಹಾಸದ ಕಥೆ ಕಟ್ಟಿದ್ದಾರೆ. ಇತಿಹಾಸವನ್ನು ಅವರೇ ಬರೆಯಲು ಹೊರಟಿದ್ದಾರೆ. ಇಂಥ ತಂತ್ರಗಳು ಫಲಿಸವು. ನಮ್ಮದು ದೇವರನ್ನು ನಂಬಿರುವ ಪಕ್ಷ. ನಮ್ಮದೇ ಪಕ್ಷ ಎಲ್ಲ ಕಡೆ ಗೆಲ್ಲಲಿದೆ. ಹಾಸನದ ಎಲ್ಲ ಕ್ಷೇತ್ರಗಳಲ್ಲೂ ನಾವೇ ಗೆಲ್ಲಲಿದ್ದೇವೆ. ಮಂಡ್ಯ ಹಾಗೂ ಮೈಸೂರಿನಲ್ಲೂ ಮೊದಲ ಸ್ಥಾನದಲ್ಲಿ ನಾವಿರಲಿದ್ದೇವೆ. 123 ಸ್ಥಾನ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಮೈತ್ರಿ ಸರ್ಕಾರದ ಅವಧಿಯಲ್ಲಿ ₹25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು ನಾನು. ಈ ವಿಷಯದಲ್ಲಿ ಸಲಹೆಯನ್ನೂ ಸಿದ್ದರಾಮಯ್ಯ ಅವರು ಕೊಡಲಿಲ್ಲ. ರೈತರ ಸಾಲಮನ್ನಾಗೆ ದುಡ್ಡು ತರಲು ಸಾಧ್ಯವಿಲ್ಲ ಎಂದಿದ್ದರು. ಬಜೆಟ್‌ ಮಂಡಿಸುವುದಕ್ಕೂ ಆಗಿನ ವಿಧಾನಸಭಾ ಸ್ಪೀಕರ್‌, ಮಾಧುಸ್ವಾಮಿ ಅಡ್ಡಗಾಲು ಹಾಕಿದ್ದರು’ ಎಂದು ದೂರಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಕೆ.ಮಹದೇವ್, ಎಂ.ಅಶ್ವಿನ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.