
ಪಿರಿಯಾಪಟ್ಟಣ: ‘ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ’ ಎಂದು ವೃತ್ತಿ ಮಾರ್ಗದರ್ಶಕ ಹಾಗೂ ಉಪನ್ಯಾಸಕ ನಾಗರಾಜ್ ಹೇಳಿದರು.
ಪಟ್ಟಣದ ಡಿ.ದೇವರಾಜ್ ಅರಸು ಕಲಾ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಭಾನುವಾರ ಏರ್ಪಡಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ನಿರಂತರ ಶ್ರಮವು ಗುರಿ ತಲುಪಲು ಮಾರ್ಗವಾಗುತ್ತದೆ. ತಾನು ಮಾಡುವ ವೃತ್ತಿಯನ್ನು ಶ್ರದ್ಧೆಯಿಂದ ಮಾಡಬೇಕು. ಜೀವನಕ್ಕೆ ವೃತ್ತಿ ಅನಿವಾರ್ಯ. ಉತ್ತಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಿಮ್ಮ ಕನಸಿನ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬೇಕು’ ಎಂದರು.
ಅನೇಕ ಸಾಮಾನ್ಯ ವ್ಯಕ್ತಿಗಳು ಇಂದು ಸಾಧಕರಾಗಲು ಸಾಕಷ್ಟು ಕಷ್ಟಗಳನ್ನು ಮೆಟ್ಟಿ ಬಂದಿದ್ದಾರೆ. ನಿಮ್ಮಲ್ಲಿರುವ ಬಡತನ, ಸಂಕಷ್ಟಗಳು ಮತ್ತು ದೌರ್ಬಲ್ಯಗಳು ನಿಮ್ಮ ಗುರಿಗೆ ಅಡ್ಡಿಯಾಗಬಾರದು. ನಿಮ್ಮ ಸಾಧನೆಯ ಕಡೆ ಮುನ್ನುಗಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಕ ಪ್ರಕಾಶ್ ಮಾತನಾಡಿ, ನಾವು ಮಾಡುವ ವೃತ್ತಿಗೆ ಮೊದಲ ಆದ್ಯತೆ ಕೊಡಿ. ವಿದ್ಯಾರ್ಥಿಗಳಿಗೆ ಕಲಿಕೆಯೇ ವೃತ್ತಿ. ಶ್ರಮ ಮತ್ತು ಪ್ರಾಮಾಣಿಕವಾಗಿ ವಿದ್ಯಭ್ಯಾಸ ಮಾಡಿದರೆ ಜೀವನ ಅಭಿವೃದ್ಧಿ ಸಾಧ್ಯ. ದುಶ್ಚಟಗಳಿಂದ ದೂರವಿರಬೇಕು. ಹದಿಹರೆಯದ ವಯಸ್ಸಿನಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಆಗ ಮಾತ್ರ ನೀವು ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಸಾಧ್ಯ. ಮಹನೀಯರ ಬಗ್ಗೆ ಅಧ್ಯಯನ ಮಾಡಿ, ಪ್ರತಿನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪಿಎಸ್ಐ ಸುರೇಶ ಮಾತನಾಡಿ, ಕಾನೂನು ಪಾಲಿಸಬೇಕು. ಬಾಲ್ಯದಲ್ಲಿ ಪೋಕ್ಸೋ ಪ್ರಕರಣದ ಬಗ್ಗೆ ಎಚ್ಚರವಿರಲಿ, ವಾಹನ ಚಾಲನೆಗೆ ಸೂಕ್ತ ದಾಖಲೆ ಇರಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಕೃಷ್ಣೆಗೌಡ ಮಾತನಾಡಿ, ಪ್ರತಿಯೊಬ್ಬರೂ ವೃತ್ತಿ ಪಡೆಯಬೇಕು. ಪೋಷಕರ ಆಸೆ ಈಡೇರಿಸಿ. ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಸಲಹೆ ನೀಡಿದರು.
ನಿಲಯ ಮೇಲ್ವಿಚಾರಕರಾದ ರಶ್ಮಿ, ವೆಂಕಟಪ್ಪ, ಪ್ರತಿಭಾ, ಕೃಷ್ಣಪ್ಪ, ಸಿಬ್ಬಂದಿ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.