ADVERTISEMENT

ಪಿರಿಯಾಪಟ್ಟಣ: ಅರಸನಕೆರೆಗೆ ತ್ಯಾಜ್ಯದ ನೀರು ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 7:17 IST
Last Updated 8 ಜುಲೈ 2023, 7:17 IST
ಪಿರಿಯಾಪಟ್ಟಣದ ಅರಸನಕೆರೆ ಕಲುಷಿತ ನೀರು ಅರಸನಕೆರೆಯನ್ನು ಸೇರಿ ನೀರು ಕಲ್ಮಶಗೊಳ್ಳುತ್ತಿರುವುದು.
ಪಿರಿಯಾಪಟ್ಟಣದ ಅರಸನಕೆರೆ ಕಲುಷಿತ ನೀರು ಅರಸನಕೆರೆಯನ್ನು ಸೇರಿ ನೀರು ಕಲ್ಮಶಗೊಳ್ಳುತ್ತಿರುವುದು.   

ಬಿ. ಆರ್. ಗಣೇಶ್

ಪಿರಿಯಾಪಟ್ಟಣ: ಪಟ್ಟಣದ ಅರಸನ ಕೆರೆ ಸುತ್ತಲೂ ನಿರ್ಮಿಸಿರುವ ವಾಕಿಂಗ್ ಪಾತ್ ಸೂಕ್ತ ನಿರ್ವಹಣೆ ಇಲ್ಲದೆ ನಾಗರಿಕರು ವಾಯುವಿಹಾರ ನಡೆಸಲು ಕಷ್ಟವಾಗಿದೆ. ತ್ಯಾಜ್ಯ ನೀರು ಕೆರೆ ಒಡಲು ಸೇರಿ ಮಲಿನವಾಗುತ್ತಿದೆ.

2013 -18ರ ಅವಧಿಯಲ್ಲಿ ಕೆ.ವೆಂಕಟೇಶ್ ಶಾಸಕರಾಗಿದ್ದಾಗ ಸಾರ್ವಜನಿಕರ ಮನವಿಗೆ ಸ್ಪಂದಿಸಿ ₹ 1.2 ಕೋಟಿ ವೆಚ್ಚದಲ್ಲಿ ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಅರಸನ ಕೆರೆ ಸುತ್ತಲೂ ಏರಿ ನಿರ್ಮಿಸಿ, ಕೆರೆ ಮಧ್ಯ ಭಾಗದಲ್ಲಿ ನಡುಗಡ್ಡೆ ನಿರ್ಮಿಸಿ ವಾಯುವಿಹಾರಕ್ಕೆ ಸುಂದರ ಪರಿಸರ ನಿರ್ಮಿಸಲಾಗಿತ್ತು.

ADVERTISEMENT

ವಾಕಿಂಗ್ ಪಾತ್ ಅಕ್ಕಪಕ್ಕ ಮತ್ತು ನಡುಗಡ್ಡೆಯಲ್ಲಿ ಕಲ್ಲು ಬೆಂಚುಗಳನ್ನು ಹಾಕಿ ಕುಳಿತುಕೊಳ್ಳುವ ವ್ಯವಸ್ಥೆ ಸಹ ಮಾಡಲಾಗಿತ್ತು. ಆರಂಭದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಈ ಪ್ರದೇಶದಲ್ಲಿ ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿತ್ತು.

ಇದರ ನಿರ್ವಹಣೆಯ ಜವಾಬ್ದಾರಿಯನ್ನು ಪುರಸಭೆಗೆ ವಹಿಸಲಾಗಿದ್ದು, ಕೆಲವು ದಿನ ಉತ್ತಮ ವಾತಾವರಣವಿತ್ತು. ಆದರೆ ಇದರ ನಿರ್ಮಾಣ ಮಾಡಿದ್ದ ಗುತ್ತಿಗೆದಾರರು ಏರಿ ಸದೃಢಗೊಳ್ಳುವ ಮೊದಲೇ ಇಂಟರ್‌ ಲಾಕ್ ಟೈಲ್ಸ್‌ಗಳನ್ನು ಅಳವಡಿಸಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಾಗ ಕೆಲವೆಡೆ ಟೈಲ್ಸ್ ಕಿತ್ತುಬರಲು ಪ್ರಾರಂಭವಾಯಿತು.

‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ನಂತರ ಪುರಸಭೆ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು. 2018ರ ಚುನಾವಣೆ ಬಳಿಕ ವಾಕಿಂಗ್ ಪಾತ್‌ ನಿರ್ವಹಣೆಯನ್ನೇ ಕೈಬಿಟ್ಟರು. ಕೆರೆ ಏರಿ ಸುತ್ತಲೂ ಅಳವಡಿಸಿರುವ ಜಾಲರಿಯುಕ್ತ ತಡೆಬೇಲಿಗೆ ಬಳ್ಳಿಗಳು ಹಬ್ಬಿಕೊಂಡು ವಿಷ ಜಂತುಗಳ
ತಾಣವಾಗಿದೆ.

ನೆಲಕ್ಕೆ ಅಳವಡಿಸಲಾಗಿರುವ ಟೈಲ್ಸ್‌ಗಳು ಬಹುತೇಕ ಎಲ್ಲಾ ಕಡೆ ಕಿತ್ತು ಹೊರ ಬಂದಿವೆ. ಸಾರ್ವಜನಿಕರು ವಿಶ್ರಮಿಸಲು ಹಾಕಿದ್ದ ಕಲ್ಲು ಬೆಂಚುಗಳು ನೆಲಕಚ್ಚಿವೆ. ಕೆರೆ ಹೂಳು ತೆಗೆಯಲು ಹಲವೆಡೆ ತಡೆಬೇಲಿಯನ್ನು ಮುರಿದು ಹಾಕಲಾಗಿದೆ.

ಕೆರೆ ಏರಿ ಸಂಪೂರ್ಣವಾಗಿ ಮರು ನಿರ್ಮಾಣವಾಗಬೇಕು, ಇಂಟರ್‌ಲಾಕ್ ಟೈಲ್ಸ್‌ಗಳನ್ನು ತೆರವುಗೊಳಿಸಿ ಸಿ.ಸಿ ರಸ್ತೆ ನಿರ್ಮಿಸಬೇಕು, ತಡೆ ಬೇಲಿಗೆ ಆವರಿಸಿಕೊಂಡಿರುವ ಗಿಡಗಂಟಿಗಳು ಮತ್ತು ಬಳ್ಳಿಗಳನ್ನು ಕಿತ್ತುಹಾಕಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

‘ವಾಕಿಂಗ್ ಪಾತ್ ಸೂಕ್ತ ನಿರ್ವಹಣೆ ಇಲ್ಲದಿದ್ದರಿಂದ ಸಂಪೂರ್ಣ ಹಾಳಾಗಿದೆ. ಒಬ್ಬೊಬ್ಬರೇ ವಾಯುವಿಹಾರಕ್ಕೆ ತೆರಳಲು ಭಯವಾಗುತ್ತಿದೆ, ಹಾವುಗಳ ಕಾಟ ಹೆಚ್ಚಿದೆ’ ಎಂದು ಛಾಯಾಗ್ರಾಹಕ ಪಿ.ಜೆ.ಪುರುಷೋತ್ತಮ್
ದೂರುತ್ತಾರೆ.

ಪುರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಇನ್ನೂ ಸಂಪೂರ್ಣಗೊಳ್ಳದಿರುವುದರಿಂದ ಪಟ್ಟಣದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರು ಪ್ರತ್ಯೇಕವಾಗಿ ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಅರಸನ ಕೆರೆಗೆ ಸೇರುತ್ತಿದೆ. ಇದರಿಂದಾಗಿ  ಕೆರೆ ಸಂಪೂರ್ಣ ಕಲ್ಮಶಗೊಂಡಿದ್ದು, ಜಲಚರಗಳು ಮತ್ತು ಕೆರೆ ಬಳಿ ಆಹಾರವನ್ನರಸಿ ಬರುವ ಪಕ್ಷಿ ಸಂಕುಲಗಳಿಗೆ ನೀರು ವಿಷಕಾರಿಯಾಗಿ ಪರಿಣಮಿಸುತ್ತಿದೆ. 

ಪಿರಿಯಾಪಟ್ಟಣದ ಅರಸನಕೆರೆ ಸುತ್ತಲೂ ನಿರ್ಮಿಸಿರುವ ವಾಕಿಂಗ್ ಪಾತ್ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಅವನತಿಯತ್ತ ಸಾಗುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.