ಎಚ್.ಡಿ.ಕೋಟೆ: ‘ಸಂಘಕ್ಕೆ ಆರ್ಥಿಕ ಶಕ್ತಿ ತುಂಬುವ ಮೂಲಕ ಸಂಘಟನೆಯನ್ನು ಬಲಗೊಳಿಸಬೇಕು’ ಎಂದು ಮಾಜಿ ಪ್ರಧಾನರಾದ ಎಂ.ಸಿ.ದೊಡ್ಡನಾಯಕ ತಿಳಿಸಿದರು.
ಪಟ್ಟಣದಲ್ಲಿ ವರ್ತಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಸಂಘವು ಕೆಲವೇ ವ್ಯಕ್ತಿಗಳಿಂದ ಸ್ಥಾಪನೆಗೊಂಡು ಕಳೆದ 30 ವರ್ಷಗಳಿಂದ ಸಂಘಟಿತವಾಗಿ 400ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸಂಘದ ವಾರ್ಷಿಕ ಮಹಾಸಭೆಯನ್ನು ಸರಿಯಾದ ಸಮಯಕ್ಕೆ ಮಾಡಿ, ಸದಸ್ಯರ ವಿಶ್ವಾಸ ಗಳಿಸಬೇಕು. ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ವರ್ತಕರು ತಕ್ಷಣವೇ ನಿಲ್ಲಿಸಲ್ಲು ಸಾಧ್ಯವಿಲ್ಲ, ಹಾಗಾಗಿ ಪುರಸಭೆ ಅಧಿಕಾರಿಗಳು ಕಾಲಾವಕಾಶ ನೀಡಬೇಕು, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಇದರ ನಿಷೇಧಕ್ಕೆ ನಮ್ಮ ಬೆಂಬಲವಿದೆ’ ಎಂದರು.
ಸಂಘದ ನೂತನ ಅಧ್ಯಕ್ಷ ಎಚ್.ಎಸ್.ವಿನಯ್ ಮಾತನಾಡಿ, ‘ಸಂಘದ ಸದಸ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ಸಂಘವು ಸಮಾಜಮುಖಿ ಕೆಲಸಗಳಿಗೆ ಸಹಕಾರ ನೀಡುತ್ತಿದ್ದು, ಎಲ್ಲರ ಸಹಕಾರದಿಂದ ಮುಂದುವರೆಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯಕುಮಾರ್ ಮಾತನಾಡಿ, ನಗರವನ್ನು ಸುಂದರವಾಗಿ ಕಾಣುವಂತೆ ಮಾಡಲು ವರ್ತಕರ ಸಹಕಾರ ಮುಖ್ಯ ವಾಗಿದೆ. ಪ್ರತಿಯೊಂದು ಅಂಗಡಿಯಲ್ಲೂ ಕಸದಬುಟ್ಟಿಯಲ್ಲಿ ಕಸ ಸಂಗ್ರಹಿಸಿದರೆ ವರ್ತಕ ಸಂಘ ಸೂಚಿಸುವ ಸಮಯಕ್ಕೆ ನಮ್ಮ ವಾಹನ ಕಳುಹಿಸಲಾಗುತ್ತದೆ. ಅಂಗಡಿಯ ಪರವಾನಗಿ ಪಡೆಯಲು ಹಲವು ಕ್ರಮಗಳಿವೆ. ಪ್ರತಿಯೊಬ್ಬರೂ ಏಪ್ರಿಲ್ ತಿಂಗಳಿನಲ್ಲಿ ನವೀಕರಿಸಿಕೊಳ್ಳಬೇಕು. ಕಟ್ಟಡದ ತೆರಿಗೆಯನ್ನು ಏಪ್ರಿಲ್ 1 ರಿಂದ 30ರ ಒಳಗೆ ಪಾವತಿಸಿದ್ದಲಿ ಶೇಕಡಾ 5ರಷ್ಟು ರಿಯಾಯಿತಿ ದೊರೆಯುತ್ತದೆ’ ಎಂದರು.
ಸಂಘದ ಮಾಜಿ ಕಾರ್ಯದರ್ಶಿ ಆಸಿಫ್ ಇಕ್ಬಾಲ್ 2017-2019ರ ಲೆಕ್ಕಪತ್ರವನ್ನು ಮಂಡಿಸಿದರು.
ಪದಾಧಿಕಾರಿಗಳು: ಎಚ್.ಎಸ್.ವಿನಯ್ (ಅಧ್ಯಕ್ಷ), ಪಳನಿಸ್ವಾಮಿ, ಆಸಿಫ್ ಇಕ್ಬಾಲ್ (ಉಪಾಧ್ಯಕ್ಷ), ಸ್ವಾಮಿ (ಪ್ರಧಾನ ಕಾರ್ಯದರ್ಶಿ), ರಾಕೇಶ್ ಶರ್ಮಾ (ಖಜಾಂಚಿ), ಕಸ್ತೂರಿ ಮಹೇಶ್ (ಸಹಕಾರ್ಯದರ್ಶಿ), ಮಿಲ್ ನಾಗರಾಜು (ಸಂಘಟನಾ ಕಾರ್ಯದರ್ಶಿ).
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಸಿ.ಎನ್.ನಾಗಣ್ಣ, ಎಸ್.ಎನ್.ರಂಗೇಗೌಡ, ಎಚ್.ಕೆ.ಪ್ರಕಾಶ್, ಚಂದ್ರಶೇಖರ ಆರಾಧ್ಯ, ಜಿ.ರವಿ ಹಾಗೂ ನಟರಾಜು, ಜಿ. ನಾರಾಯಣಲಾಲ್, ರಘು, ಸತೀಶ್ ಆರಾಧ್ಯ, ಪ್ರಭು, ಗುರುಸ್ವಾಮಿ, ಸಚಿನ್, ನಾಗು, ಜಮೀರ್, ಸಮೀ, ಆನಂದ, ಪ್ರಕಾಶ್, ವೆಂಕಿ, ಗೋವಿಂದರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.