ADVERTISEMENT

ಪ್ರಧಾನ ಮಂತ್ರಿ ಜನಮನ ಯೋಜನೆ| ಜೇನು ಕುರುಬ ಮಕ್ಕಳಿಗೆ ಶಿಕ್ಷಣ: ಮಹದೇವ್‌

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:46 IST
Last Updated 22 ಆಗಸ್ಟ್ 2025, 2:46 IST
ಹುಣಸೂರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಇದ್ದಾರೆ.
ಹುಣಸೂರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಇದ್ದಾರೆ.   

ಹುಣಸೂರು: ಹನಗೋಡು ಹೋಬಳಿ ಐಯ್ಯನಕೆರೆ ಹಾಡಿಯಲ್ಲಿ ₹ 2.60 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಕಟ್ಟಡ ನಿರ್ಮಿಸಿ ವಾರ್ಷಿಕ 28 ಜೇನುಕುರುಬ ಸಮುದಾಯದ  ವಿದ್ಯಾರ್ಥಿಗಳನ್ನು ದಾಖಲಿಸಿ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜನ್‌ಮನ್‌ ಯೋಜನೆ ಜಾರಿಗೊಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್‌ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಪಿ.ಎಂ. ಜನ್‌ಮನ್‌ ಯೋಜನೆಯಲ್ಲಿ ಜೇನುಕುರುಬ ಸಮಾಜದ ಮಕ್ಕಳಿಗೆ ವಿಶೇಷವಾಗಿ ಶಿಕ್ಷಣ ನೀಡುವ ದೃಷ್ಟಿಯಿಂದ ಕ್ಷೇತ್ರದ ಐಯ್ಯನಕೆರೆ ಹಾಡಿಯಲ್ಲಿ ಸುಸಜ್ಜಿಜಿತ ಕಟ್ಟಡ ನಿರ್ಮಿಸುತ್ತಿದ್ದು,  ಸಮುದಾಯದ 28 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗಿದೆ.  ಗ್ರಂಥಾಲಯ, ಪ್ರಯೋಗಾಲಯ ಒಳಗೊಂಡಿದೆ ಎಂದರು.

ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಗಂಗಾಧರ್‌ ಮಾತನಾಡಿ, ಐಟಿಡಿಪಿ ಯೋಜನೆಯಲ್ಲಿ ತಲಾ ₹ 60 ಲಕ್ಷ ಅನುದಾನದಲ್ಲಿ ತಾಲ್ಲೂಕಿಗೆ 9 ಬಹೂಪಯೋಗಿ ಕಟ್ಟಡ ಮಂಜೂರಾಗಿದ್ದು, ಪ್ರತಿ ಕಟ್ಟಡದಲ್ಲಿ 4 ಕೊಠಡಿ, ಸಭೆ ಸಮಾರಂಭಗಳಿಗೆ ಸಮುದಾಯ ಭವನ, ಶೌಚಾಲಯ ಒಳಗೊಂಡಿದ್ದು, ಗಿರಿಜನರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇಂಥ  ಕಟ್ಟಡ ತಾಲ್ಲೂಕಿನ ಕೊಳವಿಗೆ, ಪೆಂಜಹಳ್ಳಿ, ಬಲ್ಲೇನಹಳ್ಳಿ, ನಾಗಾಪುರ ಬ್ಲಾಕ್‌ 1 ಮತ್ತು 5 , ವೀರನಹೊಸಹಳ್ಳಿ, ಕೊಟ್ಟಿಗೆಕಾವಲ್‌, ರಂಗಯ್ಯನಕೊಪ್ಪಲು ಮತ್ತು ತೆಕ್ಕಲಹಾಡಿಯಲ್ಲಿ ನಿರ್ಮಿಸಲಾಗುವುದು ಎಂದರು.

ADVERTISEMENT

ರೇಷ್ಮೆ ವಿಸ್ತರಣೆ: ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆ ರೇಷ್ಮೆಗೆ ಒಲವು ತೋರುತ್ತಿದ್ದು, ಕ್ಷೇತ್ರದಲ್ಲಿ 297 ಪ್ರಗತಿಪರ ರೈತರು 130 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಸಾಕಣೆಕೆ ನಡೆಸಿದ್ದಾರೆ ಎಂದು ಇಲಾಖೆ ಆಧಿಕಾರಿ ಶಂಕರ್‌ ಮಾಹಿತಿ ನೀಡಿದರು. ರೈತರಿಗೆ ಪ್ರೋತ್ಸಾಹ ಧನ ಸಹಾಯ ₹ 1.75 ಲಕ್ಷ ನೀಡಿದ್ದೇವೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಸಭೆಯಲ್ಲಿ ಇದ್ದರು.

ಜೂನ್‌ ಅಂತ್ಯಕ್ಕೆ 13 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 12 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ತನಿಖೆ ಪ್ರಗತಿಯಲ್ಲಿದ್ದು ಒಂದು ಪ್ರಕರಣದಲ್ಲಿ ಎಫ್.ಐ.ಆರ್.‌ ದಾಖಲಿಸಲಾಗಿದೆ
ಹರೀಶ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಮೊಟ್ಟೆ ನೀಡಿಲ್ಲ: ಕ್ರಮಕ್ಕೆ ವರದಿ
‘ಹನಗೋಡು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯ 222 ವಿದ್ಯಾರ್ಥಿಗಳಿಗೆ 1 ತಿಂಗಳು ಮೊಟ್ಟೆ ವಿತರಿಸದೆ ಅನುದಾನ ದುರ್ಬಳಕೆಯಾಗಿದೆ ಎಂದು ಸಾರ್ವಜನಿಕರಿಂದ ಶಿಕ್ಷಣ ಇಲಾಖೆಗೆ ದೂರು ಬಂದಿದೆ.  ತನಿಖೆ ನಡೆಸಿ ಶಾಲೆಯ ಉಪ ಪ್ರಾಂಶುಪಾಲರಿಗೆ ನೋಟಿಸ್‌ ಜಾರಿಗೊಳಿಸಿ ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಮತ್ತು ಡಿಡಿಪಿಐ ಗೆ ವರದಿ ನೀಡಿದೆ’ ಎಂದು ಸಭೆಗೆ ಬಿಇಒ ಮಾಹಿತಿ ನೀಡಿದರು.
‘ಕೇಂದ್ರದ ಸೂರ್ಯ ಗರ್‌’
ತಾಲ್ಲೂಕಿನ ಬಿಳಿಕೆರೆ ಗ್ರಾಮ ಪಿ.ಎಂ. ಸೂರ್ಯ ಗರ್‌ ಯೋಜನೆಗೆ ಆಯ್ಕೆಗೊಂಡಿದ್ದು ಈ ಯೋಜನೆ ಸಂಪೂರ್ಣ ಸೌರಶಕ್ತಿ ಆಧಾರಿತ ಗ್ರಾಮವಾಗಲಿದೆ ಎಂದು ಬಿಳಿಕೆರೆ ಸೆಸ್ಕ್‌ ಎಇಇ ಅನಿಲ್‌ ಸಭೆಗೆ ತಿಳಿಸಿದರು. 5 ಸಾವಿರ ಜನಸಂಖ್ಯೆ ಇರುವ ಗ್ರಾಮ ಆಯ್ಕೆ ಮಾಡಿಕೊಂಡಿದ್ದುಯೋಜನೆಯಲ್ಲಿ ಸೋಲಾರ್‌ ಬೀದಿ ದೀಪ ಕುಡಿಯುವ ನೀರಿನ ಘಟಕದ ಕೊಳವೆ ಬಾವಿ ಬಳಕೆ ರೂಫ್‌ ಟಾಪ್‌ ಎನರ್ಜಿ ಉತ್ಪತ್ತಿಗೆ ಪ್ರತಿ ಮನೆಗೂ ಸೌರವಿದ್ಯುತ್‌ ಹಾಗೂ ಉತ್ಪತ್ತಿಗೆ ಮೇಕ್‌ ಇನ್‌ ಇಂಡಿಯಾ ಸೌರಫಲಕ ಬಳಸಿದವರಿಗೆ ಶೇ 40 ರಷ್ಟು ಸಹಾಯಧನ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.