ಮೈಸೂರು: ‘ಸಾಮಾಜಿಕ ಹೊಣೆಗಾರಿಕೆ ಇಲ್ಲದ ಬರವಣಿಗೆಯು ಉತ್ತಮ ಸಾಹಿತ್ಯವಾಗುವುದಿಲ್ಲ. ಕವಿಗೆ ಸಾಮಾಜಿಕ ಬದ್ಧತೆ ಅಗತ್ಯ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಪ್ರಸಾರಾಂಗ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಪ್ರಸಾರಾಂಗ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಕುಂಬರಹಳ್ಳಿ ರಚನೆಯ ‘ಕ್ಯಾತಯ್ಯನ ಕವನಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
‘ಸೈದ್ಧಾಂತಿಕ ಚಳವಳಿಯಿಂದ ರಾಜಕೀಯ ಕ್ಷೇತ್ರವನ್ನು ಸ್ಥಿರತೆಗೆ ತರಬಹುದು. ಸಾಹಿತ್ಯ ತೋರುವ ಸಮಸಮಾಜ ಮತ್ತು ಸರ್ವಧರ್ಮ ಸಮಭಾವ ಕಲ್ಪನೆಯಿಂದ ದೇಶ ಕಟ್ಟಬಹುದು’ ಎಂದರು.
‘ರಾಜಕೀಯ ವ್ಯವಸ್ಥೆ ಕಲುಷಿತವಾಗಿದೆ. ಜಾಗತೀಕರಣದ ಪರಿಣಾಮವಾಗಿ ಒತ್ತಡಕ್ಕೆ ಸಿಲುಕಿರುವ ಜನ ಸಮುದಾಯ ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿಯಿಂದ ದೂರವಾಗುತ್ತಿದೆ. ಸೈದ್ಧಾಂತಿಕ ಸ್ಪಷ್ಟತೆಯಿಲ್ಲದೇ ಯುವ ಸಮುದಾಯ ರಾಜಕಾರಣಕ್ಕೆ ಬರಬಾರದು’ ಎಂದು ಎಚ್ಚರಿಸಿದರು.
‘ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಹೊಣೆಗಾರಿಕೆ 'ಕ್ಯಾತಯ್ಯನ ಕವನಗಳು' ಸಂಕಲನದಲ್ಲಿದೆ. ಪ್ರತಿಯೊಂದು ಕವನಗಳು ಆಡುಭಾಷೆಯ ಶೈಲಿಯಲ್ಲಿದ್ದು, ಎಲ್ಲರಿಗೂ ತಲುಪುವ ಬದುಕಿನ ವಿಚಾರಗಳನ್ನು ಒಳಗೊಂಡಿದೆ’ ಎಂದು ಮಂಡ್ಯ ಸರ್ಕಾರಿ ಪದವಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಕೆ.ಎಂ. ಪ್ರಸನ್ನಕುಮಾರ್ ಕೆರಗೋಡು ಹೇಳಿದರು.
ಗೀತಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶೀಲಾ, ಯೋಗೇಶ್ ಆರ್.ಶಂಬಹಳ್ಳಿ, ಸಂಶೋಧನಾ ವಿದ್ಯಾರ್ಥಿಗಳಾದ ಮಹದೇವಸ್ವಾಮಿ ಎಂ.ಚೋರನಹಳ್ಳಿ, ಎಚ್.ಆರ್.ಸಂತೋಷ್ಕುಮಾರ್, ಮಹಾಂತಪ್ಪ ನವಲಕಲ್, ಎಸ್ಎಂಪಿ ಪ್ರಕಾಶನದ ಎಸ್.ಪಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಸಮಾಗಮ ತಂಡದ ಶಿವು, ಮಹದೇವಸ್ವಾಮಿ, ರಾಹುಲ್, ಸ್ವಾಮಿ ರೈತಗೀತೆ ಹಾಡಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಸಂಜೆ ವಿವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸೌಭಾಗ್ಯವತಿ, ಸಹ ಪ್ರಾಧ್ಯಾಪಕ ಪಿ.ಚಂದ್ರಶೇಖರ, ವಕೀಲ ಶಿವಪ್ರಸಾದ್ ಎಂ.ಸಿ.ಹುಂಡಿ, ನಿವೃತ್ತ ಎಎಸ್ಐ ಸಿ.ರಂಗಯ್ಯ ಉಪಸ್ಥಿತರಿದ್ದರು.
ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ರಾಜಕಾರಣ ಅಗತ್ಯ ಸಾಮಾಜಿಕ ಹೊಣೆಗಾರಿಕೆಯಿಂದ ಉತ್ತಮ ಸಾಹಿತ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.