ಮೈಸೂರು: ಮೈಸೂರು– ಕೊಡಗು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿರುವುದರಿಂದ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
8 ಕಡೆ ಚೆಕ್ಪೋಸ್ಟ್ಗಳನ್ನು ತೆರೆದು ವಾಹನಗಳು ಮತ್ತು ಸಾರ್ವಜನಿಕರ ಮೇಲೆ ನಿಗಾ ವಹಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ 900 ಮತ್ತು ನಗರದಲ್ಲಿ 700ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಗರದಲ್ಲಿ ಎಲ್ಲಿಯಾದರೂ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣವೇ ಸ್ಥಳಕ್ಕೆ ತೆರಳಲು ಎಂದು 78 ಚೀತಾ ಹಾಗೂ 40 ಗರುಡ ವಾಹನಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
ಬಾಂಬ್ ಸ್ಫೋಟದಂತಹ ಘಟನೆಯನ್ನು ತಡೆಯಲು 10 ಲೋಹಶೋಧಕ ಯಂತ್ರಗಳು ಹಾಗೂ ತಲಾ ಒಂದೊಂದು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ತಪಾಸಣೆಗಾಗಿ ವಿವಿಧೆಡೆ ನೇಮಿಸಲಾಗಿದೆ.
ಉಳಿದಂತೆ, ಮೂವರು ಡಿಸಿಪಿಗಳು ಭದ್ರತೆಯ ಹೊಣೆ ಹೊತ್ತಿದ್ದಾರೆ. 11 ಮಂದಿ ಎಸಿಪಿಗಳು, 28 ಇನ್ಸ್ಪೆಕ್ಟರ್ಗಳು, 23 ಸಬ್ಇನ್ಸ್ಪೆಕ್ಟರ್ಗಳು ಎಲ್ಲೆಡೆ ಹದ್ದಿನ ಕಣ್ಣಿಡಲಿದ್ದಾರೆ.
ಹೆಚ್ಚುವರಿ ಭದ್ರತೆಗಾಗಿ ನಗರ ಸಶಸ್ತ್ರ ಘಟಕದ 22 ತುಕಡಿಗಳು, ರಾಜ್ಯ ಮೀಸಲು ಪಡೆಯ 4 ತುಕಡಿಗಳು, 30 ಅಶ್ವಾರೋಹಿ ದಳ ಹಾಗೂ 2 ಕಮಾಂಡೊ ಪಡೆಯನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಗಳು ಸಂಭವಿಸಿದರೆ ತಕ್ಷಣ ಇವರು ಸ್ಥಳಕ್ಕೆ ತೆರಳಿ ನಿಭಾಯಿಸಲಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಗಲಾಟೆ ನಡೆದಿದ್ದ ಮಂಡಿಮೊಹಲ್ಲಾದಲ್ಲಿ ಈಗಾಗಲೇ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಮಫ್ತಿಯಲ್ಲಿರುವ ಪೊಲೀಸರು ವಿಶೇಷ ನಿಗಾ ಇರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.