ADVERTISEMENT

ಕರ್ತವ್ಯನಿರತ ಪೊಲೀಸರ ಸಾವಿನ ಸಂಖ್ಯೆ ಕ್ಷೀಣಿಸಲಿ: ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ

ಪೊಲೀಸ್‌ ಘಟಕಗಳಿಂದ ಹುತಾತ್ಮರಿಗೆ ಗೌರವ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 13:03 IST
Last Updated 21 ಅಕ್ಟೋಬರ್ 2023, 13:03 IST
ಜಿಲ್ಲಾ ಪೊಲೀಸ್‌ ಘಟಕಗಳು ಪೊಲೀಸ್‌ ಹುತಾತ್ಮರ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ ಪುಷ್ಪನಮನ ಸಲ್ಲಿಸಿದರು
ಜಿಲ್ಲಾ ಪೊಲೀಸ್‌ ಘಟಕಗಳು ಪೊಲೀಸ್‌ ಹುತಾತ್ಮರ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ ಪುಷ್ಪನಮನ ಸಲ್ಲಿಸಿದರು   

ಮೈಸೂರು: ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕರು, ಮೈಸೂರು ನಗರ, ಮೈಸೂರು ಜಿಲ್ಲೆ, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆ.ಎಸ್.ಆರ್.ಪಿ ಘಟಕಗಳ ವತಿಯಿಂದ ಪೊಲೀಸ್ ಹುತಾತ್ಮರ ಉದ್ಯಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಶನಿವಾರ ನಡೆಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ದೇಶದಲ್ಲಿ ಕರ್ತವ್ಯನಿರತರಾಗಿದ್ದಾಗ ಹುತಾತ್ಮರಾಗಿದ್ದವರ ಸಂಖ್ಯೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 16 ಪೊಲೀಸರನ್ನು ನಾವು ಕಳೆದುಕೊಂಡಿದ್ದೇವೆ. ಈ ಸಂಖ್ಯೆ ಮುಂದೆ ಕಡಿಮೆಯಾಗಲಿ ಎಂದು ಪ್ರಾರ್ಥಿಸೋಣ’ ಎಂದರು.

‘1951ರಿಂದ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಸಮಾಜದ ಹಿತಕ್ಕಾಗಿ ಜೀವ ಪಣವಾಗಿಟ್ಟು ಕೆಲಸ ಮಾಡಿ ಹುತಾತ್ಮರಾದವರನ್ನು ನೆನೆಯುವುದು ನಾಗರಿಕ ಸಮಾಜದ ಕರ್ತವ್ಯ. ಹುತಾತ್ಮರ ದಿನಾಚರಣೆಯ ಉದ್ದೇಶವೂ ಇದೇ ಆಗಿದೆ. ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಶಾಂತಿ ಕಾಪಾಡಲು ಸಮಯದ ಮಿತಿ ಇಲ್ಲದೆ ದುಡಿಯುತ್ತಿದ್ದಾರೆ. ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅಭಿಮಾನದ ವಿಚಾರ’ ಎಂದು ಹೇಳಿದರು.

ADVERTISEMENT

ಮಹದೇವಸ್ವಾಮಿ ನೇತೃತ್ವದ ಕೆಎಸ್‌ಆರ್‌ಪಿ ಸಿಬ್ಬಂದಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಪೊಲೀಸ್‌ ಬ್ಯಾಂಡ್‌ ತಂಡದವರು ‘ದಿಸ್ ಇಸ್‌ ಮೈ ಪ್ರೇಯರ್‌’ ಹಾಗೂ ‘ಅವೈಟ್‌ ವಿದ್‌ ಮೀ’ ವಿದಾಯ ಗೀತೆ ನುಡಿಸಿದರು.

ದಕ್ಷಿಣ ವಲಯ ಐಜಿಪಿ ಬೋರೇಲಿಂಗಯ್ಯ, ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌, ಪೊಲೀಸ್‌ ಅಕಾಡೆಮಿ ನಿರ್ದೇಶಕ ಲೋಕೇಶ್‌.ಬಿ, ಶಾಸಕ ಟಿ.ಎಸ್‌.ಶ್ರೀವತ್ಸ, ಎಎಸ್ಪಿ ಬಿ.ಎನ್‌.ನಂದಿನಿ, ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್‌.ಜಾಹ್ನವಿ ಇದ್ದರು.

ಜಿಲ್ಲಾ ಪೊಲೀಸ್‌ ಘಟಕಗಳು ಪೊಲೀಸ್‌ ಹುತಾತ್ಮರ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಗೌರವಾರ್ಥ ಮೂರು ಸುತ್ತು ಕುಶಾಲತೋಪು ಸಿಡಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.