ADVERTISEMENT

‘ಬಡವರೇ ದೇಶ ಕಾಯ್ದವರು; ಶ್ರೀಮಂತರಲ್ಲ’

ಸುಸ್ಥಿರ ಬದುಕು ಕಟ್ಟಲು ಯುವ ಸಮುದಾಯ ಯೋಚಿಸಲಿ: ಹರೀಶ್‌ ಹಂದೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 10:06 IST
Last Updated 26 ಮೇ 2022, 10:06 IST
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ‘ಬಡತನ ಮತ್ತು ಸುಸ್ಥಿರತೆ’ ಉಪನ್ಯಾಸವನ್ನು ಸೆಲ್ಕೊ ಇಂಡಿಯಾದ ಹರೀಶ್‌ ಹಂದೆ ನೀಡಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಬಿ.ಆರ್‌.ಪೈ ಇದ್ದಾರೆ
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ‘ಬಡತನ ಮತ್ತು ಸುಸ್ಥಿರತೆ’ ಉಪನ್ಯಾಸವನ್ನು ಸೆಲ್ಕೊ ಇಂಡಿಯಾದ ಹರೀಶ್‌ ಹಂದೆ ನೀಡಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಬಿ.ಆರ್‌.ಪೈ ಇದ್ದಾರೆ   

ಮೈಸೂರು: ‘ದೇಶವನ್ನು ಬಿಕ್ಕಟ್ಟುಗಳಿಂದ ಕಾಯ್ದವರು, ಮುನ್ನಡೆಸಿದವರು ಬಡವರೇ ಹೊರತು ಶ್ರೀಮಂತರಲ್ಲ. 60 ಕೋಟಿ ಜನರ ದಿನದ ಗಳಿಕೆ ₹ 30 ಆಗಿರುವಾಗ ಬಡವರಿಗಾಗಿ, ಅವರಿಗೆ ಸುಸ್ಥಿರ ಬದುಕನ್ನು ಕಟ್ಟಿಕೊಡುವುದಕ್ಕಾಗಿ ಯುವ ಸಮುದಾಯವು ಹಂಬಲಿಸಬೇಕು’ ಎಂದು ಸೆಲ್ಕೋ ಇಂಡಿಯಾದ ಹರೀಶ್ ಹಂದೆ ಕರೆ ನೀಡಿದರು.

ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ‘ದಲ್ಲಿ ‘ಬಡತನ ಮತ್ತು ಸುಸ್ಥಿರತೆ’ ಕುರಿತು ವಿದ್ಯಾರ್ಥಿಗಳು– ಶಿಕ್ಷಕರನ್ನುದ್ದೇಶಿಸಿ ಅವರು ಮಾತನಾಡಿದರು.

‘ಸರ್ಕಾರದಿಂದ ಸಾಲಮನ್ನಾ ಸೇರಿದಂತೆ ಇತರ ಯೋಜನೆಗಳಡಿ ಬಡವರಿಗೆ ಶೇ 2 ಸಬ್ಸಿಡಿ ಸಿಕ್ಕರೆ, ಮಧ್ಯಮ ವರ್ಗದವರಿಗೆ ಅಗ್ಗದ ವಿಮಾನಯಾನ, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಸೇವೆಗಳಡಿ ಶೇ 6 ಸಬ್ಸಿಡಿ ಸಿಗುತ್ತದೆ. ಆದರೆ, ಮಧ್ಯಮವರ್ಗವು ಬಡವರನ್ನೇ ದೂರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮಧ್ಯಮ ವರ್ಗದ ಮಕ್ಕಳು ಐಐಟಿ, ಐಐಎಂ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವುದು ಬಡವರ ಬೆವರಿನ ತೆರಿಗೆಯಲ್ಲಿ ಎಂಬುದನ್ನು ನೆನಪಿಡಬೇಕು. ವಿಪರ್ಯಾಸವೆಂದರೆ ಅಲ್ಲಿ ಕಲಿತವರು ವಿದೇಶಗಳಿಗೆ ಹೋಗುತ್ತಾರೆ. ಇಲ್ಲಿ ಅವರಿಗಾಗಿ ದುಡಿದವರನ್ನು ಮರೆಯುತ್ತಾರೆ’ ಎಂದರು.

ಪರಿಹಾರೋಪಾಯ ನೀಡಿ: ‘ಜಗತ್ತಿನ ಎಲ್ಲ ಸಮಸ್ಯೆಗಳು ನಮ್ಮಲ್ಲಿವೆಯೆಂದು ದೂರುವುದಕ್ಕಿಂತ ಪ್ರತಿ ಸಮಸ್ಯೆಗೂ ಐದು ಪರಿಹಾರೋಪಾಯ ನೀಡುವತ್ತ ಎಲ್ಲರೂ ಮುಂದಾದರೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸೂಪರ್‌ ಪ‍ವರ್‌ ದೇಶ ಭಾರತವೇ ಆಗಲಿದೆ’ ಎಂದು ಹಂದೆ ಹೇಳಿದರು.

‘ಪ್ರತಿಯೊಂದು ರಾಜ್ಯದ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಮಾರ್ಗಗಳನ್ನು ಕಂಡುಹಿಡಿದರೆ ಜಗತ್ತಿನ ಹಲವು ದೇಶಗಳನ್ನು ಬಿಕ್ಕಟ್ಟುಗಳಿಂದ ಪಾರು ಮಾಡಬಹುದು. ಭಾರತದ ಒಂದೊಂದು ರಾಜ್ಯವೂ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಗಶಾಲೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಉತ್ತರ ಭಾರತದ ಗಂಗಾ ನದಿ ಬಯಲಿನ ಸಮಸ್ಯೆಗಳ ಪರಿಹಾರಗಳು ಈಜಿಪ್ಟ್‌ನ ನೈಲ್‌ನ ಸಮಸ್ಯೆಯನ್ನು ಮುಕ್ತಗೊಳಿಸಿದರೆ; ಒಡಿಶಾದ ಚಂಡಮಾರುತ, ಮಹಾರಾಷ್ಟ್ರದ ಬರ ಸಮಸ್ಯೆ ಪರಿಹರಿಸಿದರೆ ಫಿಲಿಪ್ಪೀನ್ಸ್‌, ತಾಂಜೇನಿಯಾದ ಸಮಸ್ಯೆಗಳಿಗೆ ಮುಕ್ತಗೊಳಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಉದಾಹರಿಸಿದರು.

ವಿಡಬ್ಲ್ಯೂಎಫ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಬಿ.ಆರ್. ಪೈ ಅವರು ಶ್ರೀಎಂ ಅವರ ‘ಸಾಧನಾ – ಪಾಥ್ ಆಫ್ ಲಿಬರೇಷನ್’ ಕೃತಿ ಬಿಡುಗಡೆ ಮಾಡಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.