ADVERTISEMENT

ಗೌಡರಿಗೆ ನಾಯಕರನ್ನು ಬೆಳೆಸಿ ಗೊತ್ತು, ತುಳಿದು ಅಲ್ಲ: ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 19:14 IST
Last Updated 3 ಏಪ್ರಿಲ್ 2024, 19:14 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ನಾಯಕರನ್ನು ಬೆಳೆಸಿ ಗೊತ್ತೇ ಹೊರತು, ತುಳಿದು ಗೊತ್ತಿಲ್ಲ. ನನಗೆ ಟಿಕೆಟ್ ಕೊಡುವಂತೆ ಅಮಿತ್‌ ಶಾ ಅವರನ್ನು ಕೇಳಿದವರಲ್ಲಿ ಅವರೇ ಪ್ರಮುಖರು’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

‘ಪ್ರತಾಪ ಸಿಂಹಗೆ ಟಿಕೆಟ್ ತಪ್ಪಿಸಿದ್ದೇ ದೇವೇಗೌಡರು’ ಎಂಬ ಸಚಿವ ಕೆ. ವೆಂಕಟೇಶ್‌ ಹೇಳಿಕೆಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯಿಸಿ, ‘ವೆಂಕಟೇಶ್‌ ಹೇಳಿಕೆ ನೋಡಿ ಅವರ ಮೇಲಿದ್ದ ಗೌರವ ಕಡಿಮೆಯಾಯಿತು. ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೆಗೌಡರು ಎಂಬುದನ್ನು ಮರೆಯಬೇಡಿ’ ಎಂದರು.

‘ಕಾಂಗ್ರೆಸ್‌ನವರಿಗೆ ಈಗಲೂ ಅವಕಾಶವಿದ್ದು, ಮೈಸೂರಿನ ಅಭ್ಯರ್ಥಿಯನ್ನು ಬದಲಿಸಿ ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ. ಒಕ್ಕಲಿಗರನ್ನೆಲ್ಲ ಇಷ್ಟು ದಿನ ತುಚ್ಛವಾಗಿ ಬೈಯ್ದ ಹೊಲಸು ಬಾಯಿಯ ವ್ಯಕ್ತಿ ನಿಮ್ಮ ಅಭ್ಯರ್ಥಿ. ಒಕ್ಕಲಿಗರು ಎಂದರೆ ಅವರಿಗೆ ನೇರವಂತಿಕೆ, ಗಡಸು ಸ್ವಭಾವವಿರುತ್ತದೆ. ಆದರೆ ನಿಮ್ಮ ಅಭ್ಯರ್ಥಿಗೆ ಈ ಯಾವುದಾದರೂ ಲಕ್ಷಣವಿದೆಯಾ? ಮೊದಲು ಅಭ್ಯರ್ಥಿ ಬದಲಾಯಿಸಿ, ಆಮೇಲೆ ಗೆಲ್ಲುವುದಕ್ಕೆ ಒಕ್ಕಲಿಗರ ಕಾರ್ಡ್ ಬಳಸಿ’ ಎಂದು ಸಲಹೆ ನೀಡಿದರು.

ADVERTISEMENT

‘ನಿಮ್ಮ ಅಭ್ಯರ್ಥಿಯು ಈಗ ತಾನು ಒಕ್ಕಲಿಗ ಅಂತ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆ ಪ್ರಮಾಣಪತ್ರ ಯಾವುದೋ ಕೆ.ಎಸ್.ಓ.ಯು, ಅಲ್ಲಿ ಇಲ್ಲಿ ಸಿಗುತ್ತಿತ್ತಲ್ಲ ಆ ಪ್ರಮಾಣ ಪತ್ರ ನಾ’ ಎಂದು ಪ್ರಶ್ನಿಸಿದರು. ಮಾತಿನ ಭರದಲ್ಲಿ ಮುಕ್ತ ವಿ.ವಿ. ಶಿಕ್ಷಣದ ಗುಣಮಟ್ಟವನ್ನು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.