ಮೈಸೂರು: ‘ಕೆಆರ್ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೆ ಅದರ ಬದಲಾವಣೆ ಬೇಡ. ಇದಕ್ಕೆ ತಕರಾರು ಇಲ್ಲ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕೆಆರ್ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದ್ದೆ. ಸಿದ್ದರಾಮಯ್ಯ ಹೆಸರಿಡಲು ನಗರಪಾಲಿಕೆ ಮುಂದಾಗಿದೆ ಎಂಬ ವಿಚಾರ ತಿಳಿದು ವಿಚಾರಿಸಿದೆ. ಪಾಲಿಕೆ ಅಸ್ತಿತ್ವಕ್ಕೆ ಬಂದ ಮೇಲೆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎಂದು ಹೇಳಿದರು. ಹೀಗಾಗಿ ಸಿದ್ದರಾಮಯ್ಯ ಹೆಸರು ಇಡಲಿ ಬಿಡಿ ಎಂದು ಹೇಳಿದೆ. ಈ ಹೇಳಿಕೆ ಈಗ ಸಾಕಷ್ಟು ತಿರುವು ಪಡೆದುಕೊಂಡಿದೆ’ ಎಂದರು.
‘ಕಳೆದ 11 ವರ್ಷದಿಂದ ಸಿದ್ದರಾಮಯ್ಯ ಅವರನ್ನು ಸೈದ್ದಾಂತಿಕವಾಗಿ, ಧರ್ಮದ ವಿಚಾರವಾಗಿ ವಿರೋಧ ಮಾಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ ಅವರ ಜಾತಿವಾದದ ಬಗ್ಗೆ ಖಡಾಖಂಡಿತವಾಗಿ ವಿರೋಧ ಮಾಡಿದವನು ಪ್ರತಾಪ ಸಿಂಹ ಒಬ್ಬನೇ. ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ಹೆಸರಿಡಿಸಿದ್ದು ನಾನು. ಮಹಿಷ ದಸರಾಗೆ ವಿರೋಧ ಮಾಡಿದ್ದು ನಾನೊಬ್ಬನೇ. ಇದಕ್ಕೆ ನಮ್ಮ ಪಕ್ಷದ ನಾಯಕರೇ ನನ್ನ ಜೊತೆಗೆ ಬರಲಿಲ್ಲ. ಇದು ನನ್ನ ಬದ್ದತೆ’ ಎಂದು ಸ್ಪಷ್ಟನೆ ನೀಡಿದರು.
‘ವರುಣ ವಿಧಾನಸಭೆ ಕ್ಷೇತ್ರದ ಚುನಾವಣೆ ವೇಳೆ ಹೋರಾಟ ಮಾಡಿದ್ದಕ್ಕೆ ಸಿದ್ದರಾಮಯ್ಯ ನನ್ನ ಮೇಲೆ ಎರಡು ಕೇಸ್ ಹಾಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 5 ಕೇಸ್ ಹಾಕಿಸಿದ್ದಾರೆ’ ಎಂದರು.
ಪ್ರತಾಪ್ ಸಿಂಹ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ರಘು ಕೌಟಿಲ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಭ್ಯತೆ ಗೆರೆ ಮೀರಿದ ಕೆಲವು ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಹೇಳಿಕೆ ಕೊಟ್ಟವರು ಯಾವ ಪಕ್ಷದಿಂದ ಬಂದಿದ್ದಾರೆ. ಅವರು ಸ್ಥಾನಮಾನಗಳಿಗಾಗಿ ಯಾವ್ಯಾವ ದಾರಿ ಹಿಡಿದರು ಎಂಬುದು ಇಡೀ ಮೈಸೂರಿಗೆ ಗೊತ್ತಿದೆ’ ಎಂದರು.
'ಬಿಜೆಪಿಯಲ್ಲೇ ಇರುವೆ'
‘ನಮ್ಮಪ್ಪನೂ ಜನಸಂಘ. ಪ್ರತಾಪಸಿಂಹನೂ ಜನಸಂಘದ ಹೊಸ ಅವತಾರ. ನಾನು ಈಗಲೂ ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಾಗಿದ್ದರೇ ಚುನಾವಣೆ ಸಮಯದಲ್ಲೇ ಹೋಗುತ್ತಿದ್ದೆ. ಈಗ ಹೋಗುವ ದರ್ದು ಇಲ್ಲ’ ಎಂದು ಸ್ವಪಕ್ಷೀಯ ನಾಯಕರಿಗೆ ತಿರುಗೇಟು ನೀಡಿದರು.
‘ಕಳೆದ ಎರಡು ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡವರು ಯಾರ್ಯಾರು ಎಲ್ಲಿದ್ದಾರೆ ನೋಡಿ. ನಾನು ನರೇಂದ್ರ ಮೋದಿ ಹೆಸರನ್ನು ಹೇಳಿಕೊಂಡು ರಾಜಕಾರಣಕ್ಕೆ ಬಂದಿರುವವನು. ನನ್ನ ನಿಷ್ಠೆ ಹಾಗೂ ಬದ್ಧತೆ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ. ನಾನು ಕಡೆಯವರೆಗೂ ಬಿಜೆಪಿಯಲ್ಲೇ ಇರುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.