ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಿಗ್ಗೆ ಮೈಸೂರು ಅರಮನೆಗೆ ಭೇಟಿ ನೀಡಿ ವೀಕ್ಷಿಸಿದರು. ರಾಜವಂಶಸ್ಥರಾದ ತ್ರಿಷಿಕಾಕುಮಾರಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾದೇವಿ ಒಡೆಯರ್, ಆದ್ಯವೀರ್ ಒಡೆಯರ್ ಜೊತೆಗಿದ್ದರು
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗೆ ಭೇಟಿ ಕೊಟ್ಟು ವಾಸ್ತುಶಿಲ್ಪ ಸೌಂದರ್ಯ ಸವಿದರು.
ಅರಮನೆಗೆ ಬಂದ ಅವರನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿದರು. ರಾಷ್ಟ್ರಪತಿಗಳು ಅರಮನೆಯ ವಿವಿಧ ಭಾಗಗಳನ್ನು ವೀಕ್ಷಿಸಿ ಆನಂದಿಸಿದರು. ಬಳಿಕ ಅಲ್ಲಿಯೇ ಉಪಾಹಾರ ಸವಿದರು.
ಮೈಸೂರಿನ ವಿಶೇಷ ಭಕ್ಷ್ಯಗಳಾದ ಮಸಾಲೆ ದೋಸೆ, ಮೈಸೂರು ಪಾಕ್ ಜೊತೆಗೆ ಇಡ್ಲಿ–ಸಾಂಬಾರ್, ಶ್ಯಾವಿಗೆ ಉಪ್ಪಿಟ್ಟು, ಸಬ್ಬಕ್ಕಿ ವಡೆ, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾ ಅನ್ನು ಉಣಬಡಿಸಲಾಯಿತು. ಜೊತೆಗೆ ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನೂ ಇಡಲಾಗಿತ್ತು. ರಾಷ್ಟ್ರಪತಿಗಳ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ಈ ಎಲ್ಲವನ್ನೂ ವಿಶೇಷವಾಗಿ ಸಿದ್ಧಪಡಿಸಲಾಗಿತ್ತು.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್, ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಹಾಗೂ ಪುತ್ರ ಆದ್ಯವೀರ್ ಜೊತೆಗಿದ್ದರು.
ನಂತರ ರಾಷ್ಟ್ರಪತಿಗಳು ಮೈಸೂರು ವಿಮಾನ ನಿಲ್ದಾಣದ ಮೂಲಕ ದೆಹಲಿಯತ್ತ ಪ್ರಯಾಣಿಸಿದರು. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೀಳ್ಕೊಟ್ಟರು.
ಮೈಸೂರಿಗೆ ರಾಷ್ಟ್ರಪತಿಗಳು ಭೇಟಿ ನೀಡಿದ್ದು ಇದು ಎರಡನೇ ಬಾರಿ. 2022ರಲ್ಲಿ ಅವರು ದಸರಾವನ್ನು ಉದ್ಘಾಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.