ಮೈಸೂರು: ‘ಅಯಾಚಿತವಾಗಿ ಹಾಗೂ ಅನಿರೀಕ್ಷಿತವಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸಹಜವಾಗಿಯೇ ಸಂತೋಷವಾಗಿದೆ. 85 ವರ್ಷವಾಗಿದ್ದರೂ ಮತ್ತಷ್ಟು ಕೆಲಸ ಮಾಡಬೇಕು ಎನ್ನುವ ಹುರುಪು ತುಂಬಿದೆ’ ಎಂದು ನಿವೃತ್ತ ಪ್ರಾಧ್ಯಾಪಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಂ.ವೆಂಕೋಬರಾವ್ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.
ಕೆ.ಸಿ.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಚಿಂತಾಮಣಿಯ ಆಜಾದ್ ವೃತ್ತದಲ್ಲಿ ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡಿದ ಹೆಗ್ಗಳಿಕೆ ಇವರದು. ನಂತರ, 1962ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ, ಶೇಷಾದ್ರಿ ಜಗನ್ನಾಥರಾವ್ ಜೋಶಿ, ಸೇರಿದಂತೆ ಹಲವರ ಜತೆ ಇವರು ಒಡನಾಟ ಹೊಂದಿದ್ದರು.
ಎಬಿವಿಪಿಯ ಪ್ರಥಮ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡ ಇವರು, ಆರ್ಎಸ್ಎಸ್ನಲ್ಲಿ ರಾಜ್ಯಮಟ್ಟದಲ್ಲಿ ಹಲವು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದರು. ರಾಷ್ಟ್ರೋತ್ಥಾನ ಪರಿಷತ್ ಕಟ್ಟುವಲ್ಲಿಯೂ ಇವರು ಶ್ರಮ ವಹಿಸಿದ್ದರು.
‘ಶ್ರೀಕಾಂತ’ ಹೆಸರಿನಲ್ಲಿ ಹಲವು ಕಥೆಗಳನ್ನು ಬರೆದಿರುವ ಇವರಿಗೆ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿಯೂ ಲಭಿಸಿತ್ತು. ‘ಭೂಮಿ ಕಂಪಿಸಲಿಲ್ಲ’ ಇವರ ಪ್ರಸಿದ್ಧ ಕಥಾಸಂಕಲನ.
ಇಲ್ಲಿನ ಬನುಮಯ್ಯ ಕಾಲೇಜಿನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ, ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯಲ್ಲಿ ಗುರುತಿಸಿಕೊಂಡು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿದ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುವ ‘ಇಂಟರ್ನ್ಯಾಷನಲ್ ಲೀಡರ್ಷಿಪ್’ ಪ್ರಶಸ್ತಿ ನೀಡಿ ಗೌರವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.