ADVERTISEMENT

ಮುಂದುವರಿದ ಬೆಮಲ್ ನೌಕರರ ಪ್ರತಿಭಟನೆ

ಪ್ರತಿಭಟನಾ ಜಾಥಾದಲ್ಲಿ 500ಕ್ಕೂ ಹೆಚ್ಚು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 10:57 IST
Last Updated 19 ಅಕ್ಟೋಬರ್ 2019, 10:57 IST
ಖಾಸಗೀಕರಣ ವಿರೋಧಿಸಿ ಬೆಮಲ್ ನೌಕರರು ಶುಕ್ರವಾರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಜಾಥಾ ನಡೆಸಿದರು.
ಖಾಸಗೀಕರಣ ವಿರೋಧಿಸಿ ಬೆಮಲ್ ನೌಕರರು ಶುಕ್ರವಾರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಜಾಥಾ ನಡೆಸಿದರು.   

ಮೈಸೂರು: ಖಾಸಗೀಕರಣ ವಿರೋಧಿಸಿ ಬೆಮಲ್ ನೌಕರರು ತಮ್ಮ ಹೋರಾಟವನ್ನು ಶುಕ್ರವಾರವೂ ಮುಂದುವರಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ನೇತೃತ್ವದಲ್ಲಿ 500ಕ್ಕೂ ಹೆಚ್ಚಿನ ಕಾರ್ಮಿಕರು ಬೃಹತ್ ಜಾಥಾ ನಡೆಸಿದರು.

ದುಡಿಯುವ ಕಾರ್ಮಿಕರ ಅಭಿಪ್ರಾಯದ ವಿರುದ್ಧ ಸರ್ಕಾರ ನಡೆಯುತ್ತಿರುವುದು ನಿಜಕ್ಕೂ ದೊಡ್ಡ ದುರಂತ ಎಂದು ಅವರು ವ್ಯಾಖ್ಯಾನಿಸಿದರು.

ADVERTISEMENT

‘ಬೆಮಲ್ ಸಂಸ್ಥೆ ಉಳಿಸಿ’ ಎಂಬ ದೊಡ್ಡ ದೊಡ್ಡ ಫಲಕಗಳನ್ನು ಹಿಡಿದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಬೆಮಲ್ ಮಾತ್ರವಲ್ಲ ದೇಶದ ಯಾವುದೇ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ಬಂಡವಾಳ ಹಿಂತೆಗೆದು ಖಾಸಗಿ ಅವರಿಗೆ ಲಾಭ ದಕ್ಕುವಂತೆ ಮಾಡಬಾರದು ಎಂದು ಒತ್ತಾಯಿಸಿದರು.

‘ಅ. 14ರಿಂದಲೂ ನಿರಂತರವಾಗಿ ಪ್ರತಿಭಟನೆ ಮಾಡುತ್ತಾ ಬರುತ್ತಿದ್ದೇವೆ. ಶನಿವಾರ ಸಂಜೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೋಂಬತ್ತಿ ಮೆರವಣಿಗೆ ಮಾಡುತ್ತೇವೆ. ಮುಂದೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎಂದು ಸಂಘಟನೆಯ ಅಧ್ಯಕ್ಷ ಎಚ್.ವೈ.ಮುನಿರೆಡ್ಡಿ ತಿಳಿಸಿದರು.

ಭಾರತ್ ಆರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್‌ಗೆ ಬೆಮೆಲ್ ಅಧಿಕಾರಿಗಳ ಒಕ್ಕೂಟ, ಬೆಮೆಲ್ ಎಸ್ಸಿ, ಎಸ್ಟಿ ವೆಲ್‌ಫೇರ್ ಅಸೋಸಿಯೇಷನ್ ಸಾಥ್‌ ನೀಡಿದ್ದವು.

ಉಪಾಧ್ಯಕ್ಷ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಡಿ.ರಾಜಶೇಖರಮೂರ್ತಿ, ಸಹಾಯಕ ಕಾರ್ಯದರ್ಶಿ ಸುರೇಶ್, ಖಜಾಂಚಿ ಎಂ.ಬಿ.ಜಗದೀಶ್, ಅಧಿಕಾರಿಗಳ ಒಕ್ಕೂಟದ ಬಿ.ಆರ್.ಚೆನ್ನವೀರಪ್ಪ, ಉಪಾಧ್ಯಕ್ಷ ಶಿವಕುಮಾರ್, ಗುರುಪ್ರಸಾದ್, ಮಾದೇಗೌಡ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.