ADVERTISEMENT

ಕಾಂಗ್ರೆಸ್ ಕಾರ್ಯಕರ್ತರಿಂದ ‘ಅಣಕು ಶವಯಾತ್ರೆ’

ಕೇಂದ್ರ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 8:54 IST
Last Updated 8 ಫೆಬ್ರುವರಿ 2021, 8:54 IST
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಅಣಕು ಶವಯಾತ್ರೆ ನಡೆಸುವ ಮೂಲಕ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಅಣಕು ಶವಯಾತ್ರೆ ನಡೆಸುವ ಮೂಲಕ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.   

ಮೈಸೂರು: ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಯತ್ನಿಸುತ್ತಿರುವ ಸಾರ್ವಜನಿಕ ವಲಯದ ಕಂಪನಿಗಳ ಪ್ರತಿಕೃತಿಗಳ ಅಣಕು ಶವಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ನ ಕೆ.ಆರ್.ವಿಧಾನಸಭಾ ಕ್ಷೇತ್ರದ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಅಣಕು ಶವಯಾತ್ರೆಯು ಸೋಮವಾರ ಪಾಲಿಕೆ ಮುಂಭಾಗದಿಂದ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದವರೆಗೂ ನಡೆಯಿತು.

ಎಲ್‌ಐಸಿ, ಬೆಮಲ್, ಭಾರತೀಯ ರೈಲ್ವೆ, ಎಚ್‌ಎಎಲ್‌, ಬ್ಯಾಂಕುಗಳು, ಬಿಎಸ್‌ಎನ್‌ಎಲ್‌ ಸೇರಿದಂತೆ ಅನೇಕ ಕಂಪನಿಗಳು ಮತ್ತು ಕಾರ್ಖಾನೆಗಳ ಪ್ರತಿಕೃತಿಗಳಿಗೆ ಚಟ್ಟ ಕಟ್ಟಿ ಹೊತ್ತುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಹೆಜ್ಜೆ ಹಾಕಿದರು.

ADVERTISEMENT

ಸ್ತ್ರೀ ಸಾಮಾನ್ಯನೊಬ್ಬರ ಪ್ರತಿಕೃತಿ ಮಾಡಿ ಅದರ ಮುಂದೆ ‘ಕೇಂದ್ರ ಸರ್ಕಾರದ ಶವಯಾತ್ರೆ’ ಎಂದು ಫಲಕ ಹಾಕಿ, ಮೆರವಣಿಗೆ ಮಾಡಲಾಯಿತು. ಸಾಮಾನ್ಯರ ಪರಿಸ್ಥಿತಿಯೂ ಇದೇ ರೀತಿಯಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಅಣಕು ಶವಗಳ ಚಟ್ಟಗಳನ್ನು ಹೊತ್ತುಕೊಂಡ ಕಾರ್ಯಕರ್ತರು, ತಮಟೆಗಳನ್ನು ಬಾರಿಸುತ್ತಾ, ಬಾಯಿ ಬಡಿದಕೊಳ್ಳುತ್ತ ಸಾಗಿದರು.

ಬೆಮಲ್‌ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಇದಕ್ಕೆ ಸಾಥ್ ನೀಡಿದವು. ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ, ಎಚ್.ಎ.ವೆಂಕಟೇಶ್, ಮಾಜಿ ಮೇಯರ್ ನಾರಾಯಣ್, ಪಾಲಿಕೆ ಸದಸ್ಯರಾದ ಗೋಪಿ, ಅಯೂಬ್‌ಖಾನ್, ಪುಷ್ಪಲತಾ ಚಿಕ್ಕಣ್ಣ, ಶೋಭಾ ಸುನಿಲ್, ಮುಖಂಡರಾದ ಚಿಕ್ಕಣ್ಣ, ಗಿರೀಶ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.