ಮೈಸೂರು: ಆತ್ಮಹತ್ಯೆ ಮಾಡಿಕೊಂಡ ನಂಜನಗೂಡು ತಾಲ್ಲೂಕು ಪ್ರಭಾರ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಅಂತ್ಯಕ್ರಿಯೆ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ನೆರವೇರಿತು.
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಕರೆ ನೀಡಲಾಗಿರುವ ವೈದ್ಯರ ಮುಷ್ಕರ ಮುಂದುವರಿದಿದೆ. ಜಿಲ್ಲೆಯಲ್ಲಿನ ಎಲ್ಲ 224 ಮಂದಿ ವೈದ್ಯಾಧಿಕಾರಿಗಳು ಕರ್ತವ್ಯದಿಂದ ದೂರ ಉಳಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೇವಿ ಆನಂದ್, ‘ಆತ್ಮಹತ್ಯೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಕಾರಣ. ಅವರನ್ನು ಅಮಾನತು ಮಾಡುವ ತನಕ ವೈದ್ಯರು ಕರ್ತವ್ಯಕ್ಕೆ ಮರಳುವುದಿಲ್ಲ. ವೈದ್ಯರು ಘನತೆಯಿಂದ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಪ್ರತಿಕ್ರಿಯಿಸಿ, ‘ಆತ್ಮಹತ್ಯೆ ಮಾಡಿಕೊಂಡ ನಾಗೇಂದ್ರ ಅವರು ಒತ್ತಡ ಇದೆ ಎಂದು ದೂರು ನೀಡಿಲ್ಲ. ನಾನು ಅವರನ್ನು ನಿಂದಿಸಿಲ್ಲ’ ಎಂದು ತಿಳಿಸಿದರು.
ಕುಟುಂಬಸ್ಥರು ಸೂಚಿಸಿದಂತೆ ತನಿಖೆಗೆ ಸಿದ್ಧ:ಸೋಮಶೇಖರ್
ನಾಗೇಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ‘ಕುಟುಂಬಸ್ಥರು ಸೂಚಿಸಿದ ರೀತಿಯಲ್ಲಿಯೇ ತನಿಖೆ ನಡೆಸಲಾಗುವುದು. ತನಿಖಾಧಿಕಾರಿಯಾಗಿ ಅವರು ಹೇಳುವ ಅಧಿಕಾರಿಯನ್ನೇ ನೇಮಕ ಮಾಡಲಾಗುವುದು. ಅಧಿಕಾರಿಯನ್ನು ರಕ್ಷಿಸುವ ಉದ್ದೇಶ ನಮಗಿಲ್ಲ. ಸದ್ಯಕ್ಕೆ ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ಕೊರೊನಾದಿಂದ ಜನರನ್ನು ರಕ್ಷಿಸಲು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ಗಳನ್ನು ಮಾಡಿಸುವಂತೆ ಹೇಳಲಾಗಿದೆ. ಇದನ್ನು ಹೆಚ್ಚು ಹೆಚ್ಚು ಮಾಡುವುದರಿಂದ ಸಾರ್ವಜನಿಕರು ಸಾವಿನದವಡೆಯಿಂದ ಪಾರಾಗುತ್ತಾರೆ. ಇದು ಸರ್ಕಾರದ ಉದ್ದೇಶ. ಈ ಕೆಲಸದಲ್ಲಿ ಒತ್ತಡ ಇದೆ ಎಂದು ಯಾವ ಅಧಿಕಾರಿಯೂ ನನಗೆ ಹಾಗೂ ಅವರ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದಿಲ್ಲ’ ಎಂದು ಹೇಳಿದರು.
ಪರಿಹಾರದ ಮೊತ್ತ ₹ 50 ಲಕ್ಷಕ್ಕೆ ಏರಿಕೆ
ಮೃತ ನಾಗೇಂದ್ರ ಅವರ ಕುಟುಂಬದವರಿಗೆ ನೀಡುವ ಪರಿಹಾರದ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಅನುಕಂಪದ ಆಧಾರದ ಮೇಲೆ ಅವಲಂಬಿತರಿಗೆ ಉದ್ಯೋಗ, ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಅವರು ಸೂಚಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.