ADVERTISEMENT

ಏಕರೀತಿಯ ಆರೋಗ್ಯ, ಶಿಕ್ಷಣ ಸೌಲಭ್ಯಕ್ಕಾಗಿ ಒತ್ತಾಯ

ಆರೋಗ್ಯ, ಶಿಕ್ಷಣ ಕ್ಷೇತ್ರ; ಸರ್ಕಾರ ವಶಕ್ಕೆ ಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 13:04 IST
Last Updated 7 ಜೂನ್ 2021, 13:04 IST
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಸರ್ಕಾರೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಪರಿವರ್ತನ ಸಂಘದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಸರ್ಕಾರೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಪರಿವರ್ತನ ಸಂಘದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಮೈಸೂರು: ಎಲ್ಲರಿಗೂ ಏಕರೀತಿಯ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ನೀಡಬೇಕು ಎಂದು ಭಾರತೀಯ ಪರಿವರ್ತನ ಸಂಘ (ಬಿಪಿಎಸ್‌)ದ ಕಾರ್ಯಕರ್ತರು ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಸೇರಿದ ಕಾರ್ಯಕರ್ತರು ಇದಕ್ಕಾಗಿ ಹೆಚ್ಚುವರಿಯಾಗಿ ತೆರಿಗೆ ಪಾವತಿಸಲೂ ಸಿದ್ಧ ಎಂದು ಘೋಷಿಸಿದರು.

ಈ ರೀತಿಯಾಗಬೇಕಾದರೆ ಮೊದಲು ಸರ್ಕಾರ ಈ ಎರಡೂ ಕ್ಷೇತ್ರಗಳನ್ನೂ ಸರ್ಕಾರೀಕರಣಗೊಳಿಸಬೇಕು. ಖಾಸಗಿಯವರಿಗೆ ಈ ಕ್ಷೇತ್ರವನ್ನು ನೀಡಬಾರದು ಎಂದು ಮನವಿ ಮಾಡಿದರು.

ADVERTISEMENT

ಜೀವರಕ್ಷಕವಾದ ಔಷಧಗಳು ಹೆಚ್ಚು ಹಣ ನೀಡಿದರಷ್ಟೇ ಸಿಗುತ್ತಿದೆ. ಹಣ ಇಲ್ಲದವರಿಗೆ ಔಷಧವೂ ಇಲ್ಲ, ಚಿಕಿತ್ಸೆಯೂ ಇಲ್ಲ ಎಂಬಂತಾಗಿದೆ. ಇಂತಹ ವ್ಯವಸ್ಥೆ ಸರಿಯಲ್ಲ ಎಂದು ಅವರು ಟೀಕಿಸಿದರು.

ಆಕ್ಸಿಮೀಟರ್‌ನಂತಹ ಉಪಕರಣಗಳ ದರ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚಿನ ಹಣ ನೀಡಿಯೇ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಶಿಕ್ಷಣಕ್ಕೂ ಸಾರ್ವಜನಿಕರು ಹೆಚ್ಚಿನ ಹಣ ವ್ಯಯಿಸಬೇಕಿದೆ. ಇದಕ್ಕೆ ಆರೋಗ್ಯ ಮತ್ತು ಶಿಕ್ಷಣ ಈ ಎರಡೂ ಕ್ಷೇತ್ರಗಳನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿರುವುದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹರಿಹಾಯ್ದರು.

ಸರ್ಕಾರ ಕೂಡಲೇ ಈ ಎರಡೂ ಕ್ಷೇತ್ರಗಳಲ್ಲಿರುವ ಖಾಸಗಿಯವರ ಪಾರಮ್ಯವನ್ನು ಕೊನೆಗಾಣಿಸಬೇಕು. ಬೇಕಾದರೆ ಇನ್ನಷ್ಟು ತೆರಿಗೆ ವಿಧಿಸಲಿ. ಆದರೆ, ಈ ಎರಡೂ ಕ್ಷೇತ್ರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಎಲ್ಲರಿಗೂ ಒಂದೇ ಬಗೆಯ ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ಸಂಚಾಲಕ ಸೋಸಲೆ ಸಿದ್ಧರಾಜು, ಮುಖಂಡರಾದ ಡಾ.ಶಿವಕುಮಾರ್, ಪ್ರತಾಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.