
ಮೈಸೂರು: ‘ ಸ್ಥಳೀಯ ಸಂಸ್ಥೆಗಳಲ್ಲಿ ಇ–ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು’ ಎಂದು ಲೋಕಾಯುಕ್ತ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಹೇಳಿದರು.
ನಜರ್ಬಾದ್ನಲ್ಲಿರುವ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಇಂದು 15ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿದ್ದು, ಬಹುತೇಕ ಅರ್ಜಿಗಳು ಇ– ಖಾತೆಗೆ ಸಂಬಂಧಿಸಿದ್ದಾಗಿವೆ. ಜನರಿಗೆ ಅನಿವಾರ್ಯವಾಗಿರುವ ಇ–ಖಾತೆ ಮಾಡಿಕೊಡಲು ಅಲೆದಾಡಿಸಬೇಡಿ’ ಎಂದರು.
‘ಕಾನೂನಾತ್ಮಕವಾಗಿ ಇ– ಖಾತೆ ನೀಡಲು ಪೂರಕ ದಾಖಲೆ ಕೇಳಿ ಪಡೆಯಿರಿ, ದಾಖಲೆ ಇಲ್ಲದಿದ್ದರೆ ಅರ್ಜಿ ಸ್ವೀಕರಿಸಿದ ರಶೀದಿ ನೀಡಿ ಅರ್ಜಿದಾರರಿಗೆ ಪೂರಕ ದಾಖಲೆ ನೀಡಲು ಸಲಹೆ ನೀಡಿ. 45 ದಿನದೊಳಗೆ ಈ ಪ್ರಕ್ರಿಯೆ ಮುಗಿಸಿ’ ಎಂದರು.
ಜಮೀನಿನ ವ್ಯಾಜ್ಯ, ನೀರಿನ ಕಂದಾಯ ಸಮಸ್ಯೆ, ಅಕ್ರಮ ವಿದ್ಯುತ್ ಸಂಪರ್ಕ ದೂರುಗಳು ಕೇಳಿಬಂದವು. ಕಾಮಗಾರಿ ಬಿಲ್ ಸಂಬಂಧ ಎಚ್.ಡಿ.ಕೋಟೆ-ಅಂತರಸಂತೆಯ ಪಿಡಿಒ ಸತಾಯಿಸುತ್ತಿರುವ ಬಗ್ಗೆ ಗುತ್ತಿಗೆದಾರರೊಬ್ಬರು ದೂರು ನೀಡಿದರು.
ತಹಶೀಲ್ದಾರ್ ಮಹೇಶ್ ಕುಮಾರ್ ‘ಸರ್ಕಾರು ಅಧಿಕಾರಿಗಳಾಗಿ ನಾವೆಲ್ಲರೂ ಜನರ ಸಮಸ್ಯೆಗೆ ಸ್ಪಂದಿಸಿದಾಗ ಇಲ್ಲಿಯವರೆಗೆ ದೂರು ಕೊಡುವ ಪ್ರಮೇಯವೇ ಬರುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಶೀಘ್ರವಾಗಿ ಸ್ಪಂದಿಸಬೇಕು’ ಎಂದು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.