ADVERTISEMENT

ಕಸ ಸುರಿಯುವವರಿಗೆ ಕಾದಿದೆ ಶಿಕ್ಷೆ

ಎಚ್ಚರಿಕೆ ನೀಡಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಂಸದ ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:29 IST
Last Updated 7 ಫೆಬ್ರುವರಿ 2021, 1:29 IST
‘ಸ್ವಚ್ಛ ಸರ್ವೇಕ್ಷಣ ಅಭಿಯಾನ’ದ ಅಂಗವಾಗಿ ಹಿನಕಲ್ ಜಂಕ್ಷನ್‌ನಿಂದ ಇಲವಾಲದವರೆಗೆ ಶನಿವಾರ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಸ್ವಚ್ಛತಾ ಅಭಿಯಾನ ಕೈಗೊಂಡರು
‘ಸ್ವಚ್ಛ ಸರ್ವೇಕ್ಷಣ ಅಭಿಯಾನ’ದ ಅಂಗವಾಗಿ ಹಿನಕಲ್ ಜಂಕ್ಷನ್‌ನಿಂದ ಇಲವಾಲದವರೆಗೆ ಶನಿವಾರ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಸ್ವಚ್ಛತಾ ಅಭಿಯಾನ ಕೈಗೊಂಡರು   

ಮೈಸೂರು: ಇಲ್ಲಿನ ರಿಂಗ್‌ರಸ್ತೆ ಸೇರಿದಂತೆ ನಗರದ ರಸ್ತೆ ಬದಿಗಳಲ್ಲಿ ಕಸ ಸುರಿಯುವವರ ವಿರುದ್ಧ ಪ್ರಕರಣ ದಾಖಲಿಸಿ, ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಕೆ ನೀಡಿದರು.

‘ಸ್ವಚ್ಛ ಸರ್ವೇಕ್ಷಣ ಅಭಿಯಾನ’ದ ಅಂಗವಾಗಿ ಇಲ್ಲಿನ ಹಿನಕಲ್ ಜಂಕ್ಷನ್‌ನಿಂದ ಇಲವಾಲದವರೆಗೆ ಶನಿವಾರ ಸ್ವಚ್ಛತಾ ಅಭಿಯಾನ ಕೈಗೊಂಡ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹೋಟೆಲ್‌ನವರು, ಮಾಂಸ ಮಾರಾಟಗಾರರು, ಸೆಲೂನ್‌ನವರು ಸೇರಿದಂತೆ ಇತರ ಅಂಗಡಿಗಳವರು ಕಸವನ್ನು ಇಲ್ಲಿ ರಾಶಿ ರಾಶಿ ತಂದು ಸುರಿಯುತ್ತಿದ್ದಾರೆ. ಸುರಿಯಬೇಡಿ ಎಂದು ಹೇಳಿ ಹೇಳಿ ಸಾಕಾಗಿದೆ. ಇನ್ನು ದಂಡ ವಿಧಿಸುವುದು, ಪ್ರಕರಣ ದಾಖಲಿಸುವುದು, ಶಿಕ್ಷೆಗೆ ಗುರಿಪಡಿಸುವುದೊಂದೇ ಉಳಿದಿರುವ ದಾರಿ ಎಂದು ಅವರು ಹೇಳಿದರು.

ADVERTISEMENT

‘ಮಾನಂದವಾಡಿ ರಸ್ತೆಯನ್ನು ಎರಡು ದಿನಗಳ ಹಿಂದೆಯಷ್ಟೇ ಸ್ವಚ್ಛಗೊಳಿಸಲಾಗಿದೆ. ಇಂದು ಬೆಳಿಗ್ಗೆ ಮತ್ತೆ ಹೋಟೆಲ್‌ನವರು ಕಸ ಸುರಿಯುತ್ತಿದ್ದರು. ನಾನು ನೋಡಿ ಅವರನ್ನು ತರಾಟೆಗೆ ತೆಗೆದುಕೊಂಡೆ. ಇದೇ ಪ್ರವೃತ್ತಿ ನಂಜನಗೂಡು ರಸ್ತೆಯಲ್ಲೂ ಇದೆ. ಜನರು ಸಹಕಾರ ನೀಡದ ಹೊರತು ಸ್ವಚ್ಛನಗರಿಯ ಪಟ್ಟ ಸಿಗುವುದಿಲ್ಲ’ ಎಂದು ತಿಳಿಸಿದರು.‌

ಕೇಂದ್ರ ಸರ್ಕಾರದಿಂದ ರಿಂಗ್‌ರಸ್ತೆ ಅಭಿವೃದ್ಧಿಗೆಂದೇ ₹ 161 ಕೋಟೆ ಹಣ ಬಿಡುಗಡೆಯಾಗಿದೆ. ಮನುಗನಹಳ್ಳಿ ಗೇಟ್‌ನಿಂದ ಹಿನಕಲ್‌ ಸಿಗ್ನಲ್‌ವರೆಗೆ ಡಾಂಬರೀಕರಣಕ್ಕೆಂದು ₹ 7.5 ಕೋಟಿ ಬಂದಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ ದಾಖಲಿಸಿದ ಮೇಲೆ ಸಹಾಯಕ್ಕೆ ಬರಬೇಡಿ– ಜಿ.ಟಿ.ದೇವೇಗೌಡ

‘ಇದೇ ಕೊನೆಯ ಬಾರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ದಾಖಲಿಸಿದ ನಂತರ ಸಹಾಯ ಮಾಡಿ ಎಂದು ಯಾರು ಬರಬೇಡಿ. ಅದರ ಬದಲು ಕಸ ಸುರಿಯಬೇಡಿ’ ಎಂದು ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.