ADVERTISEMENT

ಮೈಸೂರು | ರಾಮ–ಕೃಷ್ಣ ಉಳಿದದ್ದೇ ರಂಗ ಕಲಾವಿದರಿಂದ: ಕೆ.ವಿ. ನಾಗರಾಜಮೂರ್ತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:14 IST
Last Updated 21 ಜುಲೈ 2025, 2:14 IST
<div class="paragraphs"><p>ಮೈಸೂರಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಪೌರಾಣಿಕ ನಾಟಕತ್ರಯ’ ಮತ್ತು ‘ಬಸವಣ್ಣ ಸ್ವಾಮಿಗಳ ಸಾಹಿತ್ಯಾವಲೋಕನ’ ಕೃತಿಗಳನ್ನು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಬಿಡುಗಡೆ ಮಾಡಿದರು.&nbsp;&nbsp;</p></div>

ಮೈಸೂರಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಪೌರಾಣಿಕ ನಾಟಕತ್ರಯ’ ಮತ್ತು ‘ಬಸವಣ್ಣ ಸ್ವಾಮಿಗಳ ಸಾಹಿತ್ಯಾವಲೋಕನ’ ಕೃತಿಗಳನ್ನು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಬಿಡುಗಡೆ ಮಾಡಿದರು.  

   

– ಪ್ರಜಾವಾಣಿ ಚಿತ್ರ

ಮೈಸೂರು: ‘ನಾಡಿನಲ್ಲಿ ರಾಮ–ಕೃಷ್ಣ, ಬಸವಣ್ಣನವರು ಉಳಿದಿರುವುದು ಹಳ್ಳಿಗಳ ನಾಟಕ ಕಲಾವಿದರು ಹಾಗೂ ಭಜನಾ ತಂಡಗಳಿಂದಲೇ ಹೊರತು ಅರ್ಚಕರು–ಪೂಜಾರಿಗಳಿಂದ ಅಲ್ಲ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಹೇಳಿದರು.

ADVERTISEMENT

ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಬಸವಣ್ಣ ಸ್ವಾಮಿಗಳ ‘ಪೌರಾಣಿಕ ನಾಟಕತ್ರಯ’ ಮತ್ತು ಬಿ.ವಿ. ಉಮಾಕಾಂತ ಭೋಗಯ್ಯನಹುಂಡಿ ಸಂಪಾದನೆಯ ‘ಬಸವಣ್ಣ ಸ್ವಾಮಿಗಳ ಸಾಹಿತ್ಯಾವಲೋಕನ’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇಂದಿಗೂ ದಕ್ಷಯಜ್ಞ, ಕುರುಕ್ಷೇತ್ರ, ಸಂಪೂರ್ಣ ರಾಮಾಯಣದಂತಹ ನಾಟಕಗಳು ಹಳ್ಳಿಗಳಲ್ಲಿ ಪ್ರದರ್ಶನ ಆಗುತ್ತಿವೆ. ಪುಟ್ಟಸ್ವಾಮಯ್ಯನವರು ಬರೆದ ಕುರುಕ್ಷೇತ್ರ, ಶಾಸ್ತ್ರಿಗಳು ಬರೆದ ಸಂಪೂರ್ಣ ರಾಮಾಯಣ ಲಕ್ಷಕ್ಕೂ ಅಧಿಕ ಪ್ರದರ್ಶನ ಕಂಡಿವೆ. ಪುರಾಣದ ಪಾತ್ರಗಳು ಉಳಿದಿರುವುದೇ ಇಂತಹವರಿಂದ. ಬಸವಣ್ಣರ ಎಲ್ಲ ವಚನಗಳನ್ನು ಉತ್ತರ ಕರ್ನಾಟಕದ ನೂರಾರು ಭಜನಾ ಮಂಡಳಿಗಳು ತತ್ವ ಪದದ ರೀತಿಯಲ್ಲಿ ಹಾಡುತ್ತಾ ಜನರ ಬಾಯಿಂದ ಬಾಯಿಗೆ ತಲುಪಿಸಿವೆ’ ಎಂದು ನೆನೆದರು.

‘ಸುತ್ತೂರಿನಿಂದ ಸಿರಿಗೆರೆವರೆಗೆ ಕರ್ನಾಟಕದ ವಿವಿಧ ಮಠಗಳು ನಾಟಕದ ಮೂಲಕವೇ ಕ್ರಾಂತಿ ಮಾಡುತ್ತಿವೆ. ಶರಣ ಪರಂಪರೆ ಉಳಿಸುವ ಕೆಲಸ ಮಾಡುತ್ತಿವೆ’ ಎಂದು ಶ್ಲಾಘಿಸಿದರು.

‘ಬಸವಣ್ಣ ಸ್ವಾಮಿಗಳು ಬರೆದ ಬಸವೇಶ್ವರ ನಾಟಕವು ಪುರಾಣವನ್ನು ಬಳಸಿದ್ದರೂ ಇಡೀ ನಾಟಕ ವೈಚಾರಿಕವಾಗಿದೆ. ಚಂದ್ರಶೇಖರ ಕಂಬಾರರ ‘ಶಿವರಾತ್ರಿ’ ನಾಟಕದಲ್ಲಿ ಬರುವ ದೃಶ್ಯವೊಂದರಲ್ಲಿ ಬಿಜ್ಜಳನ ಹತ್ಯೆ ಮಾಡುವುದು ಶರಣರಲ್ಲ ಎನ್ನುತ್ತಾರೆ. ಈ ಕೃತಿ ರಚನೆಯಾಗುವ ಎಪ್ಪತ್ತು ವರ್ಷಗಳ ಹಿಂದೆಯೇ ಬಸವಣ್ಣ ಸ್ವಾಮಿಗಳು ತಮ್ಮ ನಾಟಕದಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ. ಇದು ಅವರ ಅಧ್ಯಯನ ಹಾಗೂ ವೈಚಾರಿಕತೆಗೆ ಸಾಕ್ಷಿ’ ಎಂದು ಹೇಳಿದರು.

‘ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಪುನರ್ ಸಂಪಾದನೆ ಮಾಡದೇ ಹೋಗಿದ್ದರೆ ಲಕ್ಷಾಂತರ ವಚನಗಳು ನಮಗೆ ಸಿಗುತ್ತಿರಲಿಲ್ಲ. 75 ವರ್ಷದಲ್ಲಿ ವಚನ ಸಾಹಿತ್ಯ ನಮ್ಮ ಅರಿವಿಗೆ ಬಂದಿದೆ. ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮ ಕರ್ನಾಟಕದಲ್ಲಿ ಹುಟ್ಟಿದ ಮೊದಲ ಮಾನವೀಯ ಧರ್ಮ. ನಂತರದಲ್ಲಿ ಕುವೆಂಪು ಇದನ್ನೇ ಮನುಜ ಮತ ಎಂದು ಕರೆದರು’ ಎಂದು ವಿವರಿಸಿದರು.

ಲೇಖಕ ಬಿ.ವಿ. ಉಮಾಕಾಂತ ಮಾತನಾಡಿ, ‘ಕಾಯಕ ಹಾಗೂ ದಾಸೋಹ ಎನ್ನುವ ಮೂಲ ಪರಿಕಲ್ಪನೆಯನ್ನು ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಬಿತ್ತಿ ಬೆಳೆದವರು ಗುರುಮಲ್ಲೇಶ ಶ್ರೀಗಳು. ‘ಕಂತೆ ಭಿಕ್ಷೆ’ ಎನ್ನುವುದು ನಮ್ಮ ದಾಸೋಹ ಮಠದಲ್ಲಿ ಮಾತ್ರ ಕಾಣುವ ಪರಿಕಲ್ಪನೆ. ಸ್ವಾಮಿಯೇ ಭಕ್ತನ ಮನೆಗೆ ಹೋಗಿ ಪ್ರಸಾದ ಸಂಗ್ರಹಿಸಿ ಮಠಕ್ಕೆ ಬರುವ ಭಕ್ತರಿಗೆ ನೀಡುತ್ತಿದ್ದ ವ್ಯವಸ್ಥೆ ಇದು’ ಎಂದು ವಿವರಿಸಿದರು.

ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸೋಮಹಳ್ಳಿ ವೀರಸಿಂಹಾಸನ ಶಿಲಾಮಠದ ಸಿದ್ಧಮಲ್ಲ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಇದ್ದರು.

ಭಾರತೀಯ ಸಂಸ್ಕೃತಿ ಹೆಸರಿನಲ್ಲಿ ವೈದಿಕ ಪರಂಪರೆಯನ್ನು ನಮ್ಮ ಮೇಲೆ ಹೇರುವ ಹುನ್ನಾರ ನಡೆದಿದೆ. ಈ ಬಗ್ಗೆ ನಾವು ಎಚ್ಚರವಾಗಿರಬೇಕು. ಶರಣ ಸಂಸ್ಕೃತಿ ಪಾಲಿಸಬೇಕು
ಕೆ.ವಿ. ನಾಗರಾಜ ಮೂರ್ತಿ ಅಧ್ಯಕ್ಷ ನಾಟಕ ಅಕಾಡೆಮಿ

ಕೃತಿ ಪರಿಚಯ

ಕೃತಿ: ಪೌರಾಣಿಕ ನಾಟಕತ್ರಯ ಮೂಲ

ಲೇಖಕರು: ಬಸವಣ್ಣಸ್ವಾಮಿ

ಸಂಪಾದನೆ: ಬಿ.ವಿ. ಉಮಾಕಾಂತ ಪ್ರ

ಕಾಶಕರು: ಸಂವಹನ ಪ್ರಕಾಶನ

ಪುಟಗಳು: 300

ಬೆಲೆ: ₹300

ಕೃತಿ: ಬಸವಣ್ಣಸ್ವಾಮಿಗಳ ಸಾಹಿತ್ಯಾವಲೋಕನ

ಲೇಖಕ: ಬಿ.ವಿ. ಉಮಾಕಾಂತ ಪ್ರ

ಕಾಶಕರು: ಸಂವಹನ ಪ್ರಕಾಶನ

ಪುಟಗಳು: 120

ಬೆಲೆ: ₹120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.