ಮೈಸೂರು: ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲಿ ಸೋಮವಾರ ಮಳೆ ಮುಂದುವರಿದಿದೆ. ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಇಟ್ಟಿಗೆಗೂಡಿನ ಪೆರಿಯತಂಬಿ ರಸ್ತೆಯಲ್ಲಿ ಎರಡು ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿದೆ.
ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆ ಸ್ಥಳೀಯರು ಪಾಲಿಕೆಗೆ ದೂರವಾಣಿ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಭಯ್–1 ರಕ್ಷಣಾ ತಂಡದ ಕಾರ್ಯಕರ್ತರು ಮನೆಯಲ್ಲಿದ್ದ ರಾಣಿಯಮ್ಮ (65), ಪೂಜಾ ಮಣಿ (75) ಎಂಬುವವರನ್ನು ರಕ್ಷಿಸಿದೆ.
ಡಿ.ಮಂಜುನಾಥ್, ಭುವನೇಂದ್ರ, ಸಿದ್ದರಾಜು, ಸೂರಿ, ಸಾಗರ್, ವಿವೇಕ್ ಹಾಗೂ ಸ್ಥಳೀಯರಾದ ಗಣೇಶ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಳೆಯಿಂದ ಜೆ.ಕೆ.ಮೈದಾನ, ಹೆಬ್ಬಾಳ ಸೇರಿದಂತೆ ನಗರದ ಹಲವೆಡೆ ಮರಗಳ ಕೊಂಬೆಗಳು ರಸ್ತೆಗೆ ಬಿದ್ದಿವೆ.
ಕೆ.ಆರ್.ನಗರ, ತಿ.ನರಸೀಪುರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆ
ಕೆ.ಆರ್.ನಗರ ತಾಲ್ಲೂಕಿನ ಬೇರ್ಯ, ಲಕ್ಷ್ಮೀಪುರ ಹಾಗೂ ತಿ.ನರಸೀಪುರದ ಅಂಕನಹಳ್ಳಿಯಲ್ಲಿ ತಲಾ 5 ಸೆಂ.ಮೀನಷ್ಟು ಅತ್ಯಧಿಕ ಮಳೆ ಸೋಮವಾರ ಸುರಿದಿದೆ. ಹಳಿಯೂರು, ಮಾಯಿಗೌಡನಹಳ್ಳಿಯಲ್ಲಿ 4, ಸಾಲಿಗ್ರಾಮದಲ್ಲಿ 3, ಹುಣಸೂರು ತಾಲ್ಲೂಕಿನ ಮೋದೋರಿನಲ್ಲಿ 4, ಎಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಹಾಗೂ ಪಿರಿಯಾಪಟ್ಟಣದ ಬೆಟ್ಟದಪುರ, ಬೆಟ್ಟದತುಂಗದಲ್ಲಿ ತಲಾ 3 ಸೆಂ.ಮೀನಷ್ಟು ಮಳೆಯಾಗಿದೆ. ಮಂಗಳವಾರವೂ ಇದೇ ಸ್ವರೂಪದಲ್ಲಿ ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.