ಮೈಸೂರು: ಚುನಾವಣೆಯಲ್ಲಿ ನಾವು ಭ್ರಷ್ಟಾಚಾರದ ಶಿಖರವನ್ನೇ ನೋಡುತ್ತಿದ್ದೇವೆ. ಹೀಗಾಗಿ, ನಾವು ಚುನಾವಣೆಗಳನ್ನು ಶುದ್ಧೀಕರಿಸಬೇಕಿದೆ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು.
ಇಲ್ಲಿನ ಮರುಳೇಶ್ವರ ಭವನದಲ್ಲಿ ಅವರು ಅನಿಕೇತನ ಒಕ್ಕಲಿಗ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಒಕ್ಕಲಿಗ ಸಂಘಟನೆಗಳು ಭಾನುವಾರ ಏರ್ಪಡಿಸಿದ್ದ ಡಾ.ಬಿ.ಪಾಂಡುಕುಮಾರ್ ಅವರ ರಾಜ್ಯ ಒಕ್ಕಲಿಗ ಸಂಘದ ಇತಿಹಾಸ ಪರಿಷ್ಕೃತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮನುಷ್ಯ ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಇರಲೇಬೇಕು. ಆದರೆ ಈಗ ಸಮಾಜ ಭ್ರಷ್ಟವಾಗಿದೆ. ಅಭ್ಯರ್ಥಿಗಳಲ್ಲಿ ನೈತಿಕತೆಯ ಮೌಲ್ಯಗಳನ್ನು ಜಾಗೃತಿಗೊಳಿಸಬೇಕಿದೆ. ಚುನಾವಣೆಯಲ್ಲಿ ನಾವು ದಕ್ಷ ಹಾಗೂ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಗೆದ್ದವರು ಹೇಗೆ ಸಮುದಾಯದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೋ ಹಾಗೆಯೇ ಸೋತವರೂ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅನಿಕೇತನ ಒಕ್ಕಲಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹವಾಲ್ದಾರ್ ಎಚ್.ಪಿ.ಲಿಂಗರಾಜು, ಲೇಖಕ ಡಿ.ಎಸ್.ಜಯಪ್ಪಗೌಡ, ಮುಖಂಡರಾದ ಮಹಾಲಿಂಗಂ,ಮೈಸೂರು, ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕುಮಾರ್ ಗೌಡ, ಲೇಖಕ ಪಾಂಡುಕುಮಾರ್, ಶ್ರೀಪುರುಷ ಸಾಂಸ್ಕೃತಿಕ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎನ್.ರವೀಶ್, ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್ ಅಧ್ಯಕ್ಷ ಡಾ.ಮಹಾದೇವಯ್ಯ, ನೇಗಿಲಯೋಗಿ ಸಮಾಜಸೇವಾಟ್ರಸ್ಟ್ ಗೌರವ ಅಧ್ಯಕ್ಷ ಪ್ರೊಕೆ.ಆರ್.ರಂಗಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.