ಮೈಸೂರು: ಬೆಂಗಳೂರಿನಲ್ಲಿ ಕೋವಿಡ್–19 ನಿಯಂತ್ರಿಸಲಿಕ್ಕಾಗಿ ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ರಾಜ್ಯ ಸರ್ಕಾರ ರಾಜಧಾನಿಗೆ ನಿಯೋಜಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಪರವಾಗಿ ಕುರುಬೂರು ಶಾಂತಕುಮಾರ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
‘ಇದೀಗ ರಾಜ್ಯದ ಎಲ್ಲೆಡೆಯೂ ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚುತ್ತಿದೆ. ಇಂತಹ ಹೊತ್ತಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್ಗೆ ಚಿಕಿತ್ಸೆ ಕೊಡುವುದು ತುರ್ತಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬೆಂಗಳೂರಿಗೆ ನಿಯೋಜಿಸಿದರೆ, ಈ ಜಿಲ್ಲೆಗಳಲ್ಲಿ ಸಮಸ್ಯೆ ಬಿಗಡಾಯಿಸಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಬೆಂಗಳೂರಿಗರ ಬಗ್ಗೆಯೇ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿ ತೋರಿದಂತಾಗಿದೆ. ಗ್ರಾಮೀಣ ಜನರ ರಕ್ಷಣೆಗೆ ಯಾವೊಂದು ವ್ಯವಸ್ಥೆಯೂ ಗೋಚರಿಸದಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸದಂತೆ ಕ್ರಮ ಜರುಗಿಸಬೇಕು. ಸಚಿವರನ್ನು ಬೆಂಗಳೂರು ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು’ ಎಂದು ಕುರಬೂರು ಕೋರಿದ್ದಾರೆ.
ಕೋವಿಡ್ನ ಸಂಕಷ್ಟದಲ್ಲಾದರೂ ಹಿಂದಿನ ವರ್ಷದ ಬೆಳೆ ವಿಮೆಯನ್ನು ರಾಜ್ಯ ಸರ್ಕಾರ ವಿಮಾ ಕಂಪನಿಗಳಿಂದ ಕೊಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.