ಮೈಸೂರು: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ಶುಶ್ರೂಷಕರಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿರುವ ಚಂದ್ರೋದಯ ಐ ಜನರಲ್ ಆಸ್ಪತ್ರೆ (ಸಿ.ಇ.ಜಿ.)ಯ ಶುಶ್ರೂಷಕರಾದ ಡೇವಿಡ್ ಇನೋಸ್ (24), ಅಜಯ್ (22) ಬಂಧಿತರು.
ರೋಗಿಗಳಿಗೆ ನೀಡಬೇಕಿದ್ದ ಚುಚ್ಚುಮದ್ದನ್ನು ಆರೋಪಿಗಳಿಬ್ಬರು ಬುಧವಾರ ರಾತ್ರಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ, ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ ಎರಡು ಚುಚ್ಚುಮದ್ದು ವಶಪಡಿಸಿಕೊಳ್ಳಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಬುಧವಾರ ಸಹ ಐವರು ಶುಶ್ರೂಷಕರನ್ನು ರೆಮ್ಡಿಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವಾಗ ಬಂಧಿಸಲಾಗಿತ್ತು.
ಸಿಂಡಿಕೇಟ್ ಸದಸ್ಯ ಬಂಧನ
ಬಳ್ಳಾರಿ: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಲಸಿಕೆ ಮಾರಾಟ ಆರೋಪದಡಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ ಗೌಡ ಸೇರಿ ಮೂವರನ್ನು ಕೌಲ್ಬಜಾರ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಂಜುನಾಥ ಮೆಡಿಕಲ್ ಏಜೆನ್ಸಿ ಮಾಲೀಕ ವೆಂಕಟೇಶ ಬಾಬು, ವರ್ತಕ ಪೋಲಾ ಪ್ರವೀಣ್ ಬಂಧಿತ ಇನ್ನಿಬ್ಬರು.
‘ಈಗ ಮೂವರ ಬಂಧನದ ಬಳಿಕ ತನಿಖೆ ಇನ್ನಷ್ಟು ಚುರುಕುಗೊಳಿಸಿದ್ದು, ಇನ್ನಷ್ಟು ಆರೋಪಿಗಳನ್ನೂ ಶೀಘ್ರ ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.