ಮೈಸೂರು: ‘ಆರ್ಎಸ್ಎಸ್ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಅಂಬೇಡ್ಕರ್ ಸಂವಿಧಾನದ ಪುನರ್ ಸ್ಥಾಪನೆ ಮಾಡದೇ ಹೋಗಿದ್ದರೆ ದೇಶದಲ್ಲಿ ಈಗ ಇಂದಿರಾ ಸಂವಿಧಾನ ಜಾರಿಯಲ್ಲಿ ಇರುತ್ತಿತ್ತು’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.
ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಅಂಬೇಡ್ಕರ್ ಬರೆದ ಸಂವಿಧಾನವು ಜಾತ್ಯತೀತ, ಸಮಾಜವಾದಿ ಎಂಬ ಎರಡು ಪದಗಳ ಹೊರತಾಗಿ ಮೂಲ ಸ್ವರೂಪದಲ್ಲೇ ಉಳಿದು ಇಡೀ ದೇಶದ ಜನರಿಗೆ ರಕ್ಷಣೆ ಕೊಡುತ್ತಿದೆ ಎಂದಾದರೆ ಅದರ ಹಿಂದೆ ಆರ್ಎಸ್ಎಸ್ ಹೋರಾಟವಿದೆ. ಇದಕ್ಕಾಗಿ ಆರ್ಎಸ್ಎಸ್ ಅನ್ನು ನಿಷೇಧಿಸಬೇಕು ಎನ್ನುತ್ತೀರ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದರು.
‘ಮಂತ್ರಿಯಾಗಿ ಇಲಾಖೆ ಬಗ್ಗೆ ಮಾತನಾಡದೇ ಕೇವಲ ಮೋದಿ, ಆರ್ಎಸ್ಎಸ್ ಬಗ್ಗೆ ಕೂಗುಮಾರಿ ಥರ ಬೊಬ್ಬೆ ಹೊಡೆಯುವ ನಿಮ್ಮನ್ನು ಎಂದಿಗೂ ಕಾಂಗ್ರೆಸ್ ಮುಖ್ಯಮಂತ್ರಿ ಮಾಡದು. ನಿಮ್ಮ ವಿದ್ಯಾರ್ಹತೆಗೆ ಮೀರಿದ ಖಾತೆ ಸಿಕ್ಕಿದ್ದು, ಯುವಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.
‘ಸಂತೋಷ್ ಲಾಡ್ ಮೇದಾವಿ ಅಲ್ಲ. ಮೇದಾವಿ ಥರ ಮಾತನಾಡುತ್ತಾರೆ ಅಷ್ಟೇ. ಈ ದೇಶದ ಅರ್ಥವ್ಯವಸ್ಥೆ ನಡೆಸುವುದು ಒಂದೇ ಪರ್ಮಿಟ್ ಲಾರಿಯಲ್ಲಿ ಹತ್ತು ಲೋಡ್ ಅದಿರನ್ನು ಕಳ್ಳಸಾಗಣೆ ಮಾಡಿ ದುಡ್ಡು ಮಾಡಿದಂತಲ್ಲ. ಕಾರ್ಮಿಕ ಇಲಾಖೆಯಲ್ಲಿ ₹600ರ ಕಿಟ್ ಅನ್ನು ₹2600ಕ್ಕೆ ಖರೀದಿಸಿದಂತಲ್ಲ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.