ADVERTISEMENT

ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಮೈಸೂರು ಜಿಲ್ಲಾಡಳಿತ: ಸಾ. ರಾ. ಮಹೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮೇ 2021, 6:11 IST
Last Updated 31 ಮೇ 2021, 6:11 IST
ಶಾಸಕ ಸಾ. ರಾ. ಮಹೇಶ್
ಶಾಸಕ ಸಾ. ರಾ. ಮಹೇಶ್   

ಮೈಸೂರು: ನಗರ ವ್ಯಾಪ್ತಿಯಲ್ಲಿ ಮೇ 1 ರಿಂದ ಮೇ 29ರವರೆಗೆ 969 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಮೈಸೂರು ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದೆ. ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ. ಸಾವಿನ ಸಂಖ್ಯೆಯನ್ನು ನೋಡಿ ನನಗೆ ಆಘಾತವಾಯ್ತು ಎಂದು ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, 731 ಸಾವುಗಳ‌ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ. ಈ ಸಂಬಂಧ ದಾಖಲೆ ಇದೆ ಎಂದು ವಿವರ ಬಿಡುಗಡೆ ಮಾಡಿದ್ದಾರೆ.

ಡಿಸಿ ವಿರುದ್ಧ ಆರೋಪ

ADVERTISEMENT

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರು ಹೇಳದೆಯೆ ಅವರ ಮೇಲೆ ಗಂಭೀರ ಆರೋಪ ಮಾಡಿರುವ ಶಾಸಕ ಸಾ.ರಾ.ಮಹೇಶ್, ನಿನ್ನೆ ಕೆ.ಆರ್.ನಗರದಲ್ಲಿ ಸಾವು ಝೀರೋ ಅಂತ ಲೆಕ್ಕ ತೋರಿಸಿದ್ದಾರೆ. ಆದರೆ ನನ್ನ ಗಮನಕ್ಕೆ ಬಂದಂತೆ ಚಿಕ್ಕನಾಯಕನಹಳ್ಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಸಂಸ್ಕಾರ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಯಾಕೆ ಸಾವುಗಳನ್ನು ಮುಚ್ಚಿಡುತ್ತಿದ್ದೀರಿ?

ಯಾಕೆ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೆಕ್ಕ ಕೊಡುತ್ತಿಲ್ಲ. ಯಾಕೆ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದೀರಿ.? ನಿಮಗೆ ಮಾನವೀಯತೆ, ಮನುಷ್ಯತ್ಯ, ತಾಯಿ ಹೃದಯ ಇಲ್ವ.? ಸರ್ಕಾರವನ್ನೂ ಯಾಕೆ ದಿಕ್ಕು ತಪ್ಪಿಸುತ್ತಿದ್ದೀರಿ.? ಸತ್ಯ ವರದಿ ಮಾಡಿದ್ದರೆ ಮುಖ್ಯಮಂತ್ರಿ, ಸಚಿವರು ಅಥವಾ ಯಾರಾದರೂ ಮೈಸೂರಿಗೆ ಏನು ಕೆಲಸ ಆಗಬೇಕು ಅದನ್ನು ಮಾಡುತ್ತಿದ್ದರು. ಈ ಎಲ್ಲ ದಾಖಲೆಗಳನ್ನೂ ನಾನು ಮಾನವ ಹಕ್ಕು ಆಯೋಗ, ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತೇನೆ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೇಗೆ ಕೆಲಸ ಮಾಡಿದ್ರು ಅನ್ನೋ ಕಾರಣಕ್ಕೆ ಇವರು ಮೈಸೂರಿಗೆ ಸೂಕ್ತವಲ್ಲ ಅಂತಾ ನಾವು ಹೇಳಿದ್ದೆವು. ಆರಂಭದಲ್ಲಿ ಮೈಸೂರು ಸಂಸದರು ಇವರನ್ನು ಸಮರ್ಥನೆ ಮಾಡುತ್ತಿದ್ರು. ಈಗ ಜ್ಞಾನೋದಯವಾಗಿ ಅವರು ಧ್ವನಿ ಎತ್ತಿದ್ದಾರೆ.

ದಾಖಲೆ ಬಿಡುಗಡೆ ಮಾಡಿದ ಶಾಸಕ ಸಾ.ರಾ ಮಹೇಶ್.

ಸತ್ತವರ ಮಾಹಿತಿ ಮರೆಮಾಚಿದ್ದರ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಕೊಡುವೆ. ಸಿಎಂ ಹಾಗೂ ರಾಜ್ಯಪಾಲರು ಇಬ್ಬರಿಗೂ ಕಳುಹಿಸುತ್ತೇನೆ ಎಂದು ಸಾ ರಾ ಮಹೇಶ್ ಹೇಳಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಿದ್ರೂ ಸಾವು ಇಳಿಮುಖ ಆಗಿದೆ ಅಂತಾ ಫೋಸ್ ಕೊಡ್ತಿದ್ದಾರೆ. ನಿಮ್ಮ ಈ ಅಪರಾಧಕ್ಕೆ ಏನು ಶಿಕ್ಷೆ ಕೊಡಬೇಕು. ನಾನು ದಾಖಲೆಗಳ ಸಮೇತ ಮಾಹಿತಿ ಬಹಿರಂಗಪಡಿಸಿದ್ದೇನೆ. ಮೇ ಒಂದೇ ತಿಂಗಳಲ್ಲಿ 3 ಸಾವಿರ ಜನ ಮೈಸೂರು ಜಿಲ್ಲೆಯಲ್ಲಿ ಜನ ಸತ್ತಿದ್ದಾರೆ. ಮೋಸದ ಅಂಕಿ ಅಂಶಗಳಿಂದ ಇಡೀ ಸರ್ಕಾರ ಹಾಗೂ ವ್ಯವಸ್ಥೆಯನ್ನೇ ವಂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.